ಇನ್ನಂಜೆ ಮಹಿಳೆಯ ಸರ ಸುಲಿಗೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ
ಉಡುಪಿ, ಅ.13: ಇನ್ನಂಜೆ ಗ್ರಾಮದ ಗೋಳಿಕಟ್ಟೆ ಎಂಬಲ್ಲ್ಲಿ ಅ.8ರಂದು ಮಹಿಳೆಯೋರ್ವರ ಚಿನ್ನದ ಸರ ಸುಲಿಗೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಕಾಪು ಪೊಲೀಸರು ಶನಿವಾರ ಕಟಪಾಡಿಯಲ್ಲಿ ಬಂಧಿಸಿದ್ದಾರೆ.
ರಾಯಚೂರು ಮೂಲದ ಕಟಪಾಡಿ ಪಳ್ಳಿಗುಡ್ಡೆಯ ಅಂಬಾಡಿ ವಿಷ್ಣು ಮೂರ್ತಿ ದೇವಸ್ಥಾನ ಬಳಿಯ ನಿವಾಸಿ ಕೃಷ್ಣ ನರಸಿಂಹ ಶಾಸ್ತ್ರಿ (27) ಮತ್ತು ಬಾಗಲಕೋಟೆ ಮೂಲದ ಬೆಂಗಳೂರು ಹೌಸಿಂಗ್ ಬೋರ್ಡ್ ಕೆಎಚ್ಬಿ ಕಾಲನಿ ನಿವಾಸಿ ವಿಜಯ್ ಕುಮಾರ್ (21) ಬಂಧಿತ ಆರೋಪಿಗಳು.
ಇವರಿಂದ 50 ಸಾವಿರ ರೂ. ಮೌಲ್ಯದ ಚಿನ್ನದ ಸರ, 30 ಸಾವಿರ ರೂ. ಮೌಲ್ಯದ ಬೈಕ್, ಎರಡು ಮೊಬೈಲ್ ಫೋನ್ಗಳು, 10 ಸಾವಿರ ರೂ. ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇವುಗಳ ಒಟ್ಟು ಮೌಲ್ಯ 93,000 ರೂ. ಎಂದು ಅಂದಾಜಿಸಲಾಗಿದೆ.
ಗೋಳಿಕಟ್ಟೆಯ ದಾಮೋದರ ಆಚಾರ್ಯ ಎಂಬವರ ಪತ್ನಿ ಶಾಂತಾ ಆಚಾರ್ಯ(68) ಸಂಜೆ ದನಗಳಿಗೆ ಹುಲ್ಲು ತರಲು ಹೋಗುತ್ತಿದ್ದ ವೇಳೆ ಬೈಕಿನಲ್ಲಿ ಬಂದ ಆರೋಪಿಗಳು, ಶಾಂತಾ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಸುಲಿಗೆ ಮಾಡಿ ಪರಾರಿಯಾಗಿದ್ದರು. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ ಎಸ್ಪಿ ನಿಶಾ ಜೇಮ್ಸ್ ಮತ್ತು ಹೆಚ್ಚುವರಿ ಎಸ್ಪಿ ಕುಮಾರಚಂದ್ರ ನಿರ್ದೇಶನದಂತೆ ಕಾರ್ಕಳ ಎಎಸ್ಪಿ ಕೆ.ಕೃಷ್ಣಕಾಂತ್ ಮಾರ್ಗದರ್ಶನದಲ್ಲಿ ಕಾಪು ವೃತ್ತ ನಿರೀಕ್ಷಕ ಮಹೇಶ್ ಪ್ರಸಾದ್, ಕಾಪು ಎಸ್ಸೈ ರಾಜಶೇಖರ ಬಿ.ಸಾಗನೂರು, ಪ್ರೊಬೇಷನರಿ ಎಸ್ಸೈಗಳಾದ ಉದಯ ರವಿ, ಸದಾಶಿವ ಗವರೋಜಿ, ಮಹದೇವ ಬೋಸ್ಲೆ ಹಾಗೂ ಸಿಬ್ಬಂದಿಯವರಾದ ಪ್ರವೀಣ್ ಕುಮಾರ್, ರಾಜೇಶ್, ಸಂದೇಶ್, ಸುಕುಮಾರ್, ಜಗದೀಶ್, ರವಿಕುಮಾರ್, ಮಹಾಬಲ, ಸುಧಾಕರ ಬಿಜೂರು, ಸಂದೀಪ ಶೆಟ್ಟಿ, ರಾಘವೇಂದ್ರ ಜೋಗಿ, ಆನಂದ ಈ ಕಾರ್ಯಾ ಚರಣೆ ನಡೆಸಿದ್ದಾರೆ.