ಮೂಡುಬಿದಿರೆ ತಾಲೂಕು ಕಚೇರಿಗೆ ಎಸಿಬಿ ಅಧಿಕಾರಿಗಳಿಂದ ದಾಳಿ: ಪರಿಶೀಲನೆ
ಮೂಡುಬಿದಿರೆ : ಇಲ್ಲಿನ ತಾಲೂಕು ಕಚೇರಿಗೆ ಭ್ರಷ್ಟಾಚಾರ ನಿಗ್ರಹದಳ ಅಧಿಕಾರಿಗಳು ಸೋಮವಾರ ದಾಳಿ ನಡೆಸಿ, ಪರಿಶೀಲನೆ ನಡೆಸಿದ್ದಾರೆ.
ನಾಗಕರಿರೊಬ್ಬರ ದೂರಿನ ಮೇರೆಗೆ ಕಾರವಾರ, ಉಡುಪಿ, ಚಿಕ್ಕಮಗಳೂರು ವಿಭಾಗಗಳ ಎಸ್ಪಿ, ಐದು ಮಂದಿ ನಿರೀಕ್ಷಕರು, ಏಳು ಮಂದಿ ಹೆಡ್ ಕಾಸ್ಟೇಬಲ್, ನಾಲ್ಕು ಮಂದಿ ಕಾಸ್ಟೇಬಲ್ಗಳು ದಾಳಿ ನಡೆಸಿ ಕಚೇರಿಯ ಅಟಲ್ಜೀ, ಜನಸ್ನೇಹಿ ವಿಭಾಗ, ಸರ್ವೆ ವಿಭಾಗ ಹಾಗೂ ಉಪ ತಹಶೀಲ್ದಾರ್ ಕಚೇರಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ತಾಲೂಕು ಕಚೇರಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಸೇರಿದಂತೆ ಎಂಟು ಮಂದಿಯನ್ನು ವಿಚಾರಣೆಗೊಳಪಡಿಸಿದ್ದು, ಸುಮಾರು 66 ಸಾವಿರ ರೂ. ಹೆಚ್ಚುವರಿ ಹಣ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಭಾರ ಎಸ್ಪಿ ಸುಧೀರ್ ಹೆಗ್ಡೆ ದಾಳಿ ಕುರಿತು ಮಾಧ್ಯಮದವರಿಗೆ ಮಾಹಿತಿ ನೀಡಿ, ಮೂಡುಬಿದಿರೆ ಎಸಿಬಿಗೆ ಕಂಡುಬಂದ ಮೊದಲ ಪ್ರಕರಣವಾಗಿದ್ದು, ಹೆಚ್ಚುವರಿ ನಗದು ಪತ್ತೆಯಾಗಿದೆ. ಈ ಬಗ್ಗೆ ತಹಶೀಲ್ದಾರ್ ಕಚೇರಿಯ ಸಿಬ್ಬಂದಿ ಸಮಜಾಯಿಸಿ ನೀಡಿದ್ದು, ತನಿಖೆ ನಡೆಸುತ್ತೇವೆ. ಒಂದು ವೇಳೆ ಸೂಕ್ತ ದಾಖಲೆಗಳಿಲ್ಲದ ಹಣವಾಗಿದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.