ಪುಸ್ತಕ ಬಾಳಸಂಗಾತಿಯಾಗಬೇಕು:ಉಪ್ಪುಂದ ಚಂದ್ರಶೇಖರ ಹೊಳ್ಳ
ಕಲ್ಯಾಣಪುರ, ಅ.15: ವರ್ತಮಾನದಲ್ಲಿ ಸಾಕಷ್ಟು ಕೃತಿಗಳು ಪ್ರಕಟಣೆ ಮೂಲಕ ಹೊರಬಂದರೂ, ಅದನ್ನು ಓದುವವರ ಸಂಖ್ಯೆ ಇಳಿಮುಖವಾಗುತ್ತಿದೆ ಎಂಬ ಬೇಸರ ಎಲ್ಲ ಲೇಖಕರಲ್ಲಿ ಇರುವುದು ಸಹಜ. ಆದರೆ ಜೀವನ ಪ್ರೀತಿ ಇದ್ದವರು ಪುಸ್ತಕ ಪ್ರೀತಿ ಬೆಳೆಸಿಕೊಂಡಿರು ತ್ತಾರೆ. ಇಂತವರು ಪುಸ್ತಕವನ್ನು ಸಹ ಬಾಳಸಂಗಾತಿಗಿಂತಲೂ ಹೆಚ್ಚು ಪ್ರೀತಿಸುತ್ತಾರೆ ಎಂದು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನ ಮಾಜಿ ಅಧ್ಯಕ್ಷ ಹಾಗೂ ಸಾಹಿತಿ ಉಪ್ಪುಂದ ಚಂದ್ರಶೇಖರ ಹೊಳ್ಳ ಅಭಿಪ್ರಾಯಪಟ್ಟಿದ್ದಾರೆ.
ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನಲ್ಲಿ ಅಂಪಾರು ನಿತ್ಯಾನಂದ ಶೆಟ್ಟಿ ಸಂಪಾದಕತ್ವದಲ್ಲಿ ಮೂಡಿ ಬಂದ ‘ಜಾನಪದ ಸಿರಿ’ ಕೃತಿಯನ್ನು ಬಿಡುಗಡೆ ಗೊಳಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಹಿರಿಯ ಜಾನಪದ ವಿದ್ವಾಂಸರಾದ ಚಂದ್ರೇಖರ ಹೊಳ್ಳ ಮಾತನಾಡುತಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲ ಡಾ ವಿನ್ಸೆಂಟ್ ಆಳ್ವ ಶುಭ ಕೋರಿದರು. ಕರ್ನಾಟಕ ಜಾನಪದ ಪರಿಷತ್ನ ಉಡುಪಿ ಜಿಲ್ಲಾಧ್ಯಕ್ಷರಾದ ಡಾ.ತಲ್ಲೂರು ಶಿವರಾವು ಶೆಟ್ಟಿ ಕೃತಿ ಬಿಡುಗಡೆ ಮಾಡಿದರು.
ಕನ್ನಡ ಸಾಹಿತ್ಯ ಪರಿಷತ್ನ ಉಡುಪಿ ಜಿಲ್ಲಾ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಲಯನ್ಸ್ ಕ್ಲಬ್ ಕುಂದಾಪುರ ಕೋಸ್ಟಲ್ನ ಅಧ್ಯಕ್ಷ ಅಶೋಕ್ ಶೆಟ್ಟಿ ಸಂಸಾಡಿ, ಕರ್ನಾಟಕ ಜಾನಪದ ಪರಿಷತ್ನ ಬ್ರಹ್ಮಾವರ ತಾಲೂಕು ಘಟಕದ ಅಧ್ಯಕ್ಷ ಡಾ.ನೇರಿ ಕರ್ನೇಲಿಯೋ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕೃತಿಯ ಸಂಪಾದಕ ಅಂಪಾರು ನಿತ್ಯಾನಂದ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಹಿಂದಿ ವಿಭಾಗದ ಪ್ರಾಧ್ಯಾಪಕಿ ಅನುಪಮಾ ಜೋಗಿ ಪ್ರಾರ್ಥಿಸಿ, ಕನ್ನಡ ವಿಬಾಗದ ಮುಖ್ಯಸ್ಥೆ ಹರಿಣಾಕ್ಷಿ ಎಂ.ಡಿ. ಸ್ವಾಗತಿಸಿದರು. ಆಂಗ್ಲ ವಿಭಾಗದ ಪ್ರಾಧ್ಯಾಪಕ ಸಂದೀಪ್ ಶೆಟ್ಟಿ ವಂದಿಸಿ ನಾಗೇಶ್ ಯರುಕೋಣೆ ಕಾರ್ಯಕ್ರಮ ನಿರೂಪಿಸಿದರು.