ಶಿರಸಿ ಯುವಕನ ಮೇಲೆ ಪೊಲೀಸರ ಹಲ್ಲೆ: ಆರೋಪ
ಮಂಗಳೂರು, ಅ.15: ಯುವಕನೋರ್ವನನ್ನು ಪೊಲೀಸ್ ಅಧಿಕಾರಿಗಳು ನಿಂದಿಸಿ, ಹಲ್ಲೆ ನಡೆಸಿದ್ದಾರೆಂಬ ಆರೋಪ ಕೇಳಿ ಬಂದಿದ್ದು, ಘಟನೆಯು ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ ಎನ್ನಲಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಕಸ್ತೂರ್ಬಾ ನಗರ ನಿವಾಸಿ ಮುಸನ್ನಿಫ್ ರಾಣೆಬೆನ್ನೂರು (26) ಹಲ್ಲೆಗೊಳಗಾದ ಯುವಕ.
‘ಅ.14ರಂದು ಬೆಳಗ್ಗೆ 11:30ಕ್ಕೆ ಸ್ನೇಹಿತನ ವಾಹನವೊಂದಕ್ಕೆ ಸಂಬಂಧಿಸಿದ ದಾಖಲೆ ಸಲ್ಲಿಸಲು ಶಿರಸಿ ನಗರ ಪೊಲೀಸ್ ಠಾಣೆಗೆ ತೆರಳಿದೆ. ಠಾಣೆಯಲ್ಲಿ ಸರ್ಕಲ್ ಪೊಲೀಸ್ ಇನ್ಸ್ಪೆಕ್ಟರ್ ಗಿರೀಶ್ ಭಟ್ ಸಿವಿಲ್ ಡ್ರೆಸ್ನಲ್ಲಿದ್ದರು. ನಮಸ್ಕಾರ ಹೇಳಿ, ವಾಹನದ ದಾಖಲೆ ನೀಡುತ್ತಿದ್ದಂತೆ, ನನ್ನ ಮೊಬೈಲ್ನ್ನು ಪೊಲೀಸ್ ಅಧಿಕಾರಿ ಕೇಳಿದರು. ಅವರ ಕೈಗೆ ಕ್ಷಣಮಾತ್ರದಲ್ಲೇ ಮೊಬೈಲ್ ಕೊಟ್ಟೆ. ಮೊಬೈಲ್ ವಶಕ್ಕೆ ಪಡೆದು ಮೇಲ್ಮಹಡಿಗೆ ಹೋದವರು ಸುಮಾರು 10 ನಿಮಿಷ ಕಳೆದರೂ ವಾಪಸಾಗಲಿಲ್ಲ. ಮೇಲ್ಮಹಡಿ ಪ್ರವೇಶಿಸಿ ಮೊಬೈಲ್ ಕೇಳಿದಾಗ ನಿಂದಿಸಿ, ಹಲ್ಲೆ ನಡೆಸಿದರು’ ಎಂದು ಹಲ್ಲೆಗೊಳಗಾದ ಮುಸನ್ನಿಫ್ ರಾಣೆಬೆನ್ನೂರು ಆರೋಪಿಸಿದ್ದಾರೆ.
‘ಎಸ್ಡಿಪಿಐ, ಪಿಎಫ್ಐನಂತಹ ಸಂಘಟನೆಗಳು ನಿನಗೆ ಬೇಕಾ ? ಎಂದು ಪ್ರಶ್ನಿಸಿದ ಸರ್ಕಲ್ ಇನ್ಸ್ಪೆಕ್ಟರ್ ಗಿರೀಶ್ ಭಟ್, ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಅಲ್ಲದೆ, ಕಾಲಿನಿಂದ ನನಗೆ ಒದ್ದರು. ಒದ್ದ ಹೊಡೆತಕ್ಕೆ ಹಿಂದೆ ಬಿದ್ದೆ. ಆನಂತರ ಮೇಲ್ಮಹಡಿಯ ಮೂಲೆಯಲ್ಲಿ ನಿಲ್ಲಿಸಿ ತಲೆಗೂದಲು ಹಿಡಿದು ಮೂಗಿಗೆ 6-7 ಬಾರಿ ಗುದ್ದಿದರು. ವಾಟ್ಸ್ಆ್ಯಪ್ನಲ್ಲಿ ಅಂತಹ ಸಂಘಟನೆಯ ಮೇಸೆಜ್ಗಳು ಬರುವುದು ಸಾಮಾನ್ಯ. ಆ ಮೇಸೆಜ್ನಲ್ಲಿ ಕಾನೂನಿಗೆ ವಿರುದ್ಧವಾದ ಯಾವ ಮಾಹಿತಿಯೂ ಇಲ್ಲ ಎಂದು ಬೇಡಿಕೊಂಡೆ. ಬಳಿಕವೂ ಮರ್ಮಾಂಗಕ್ಕೆ 2-3 ಬಾರಿ ಕಾಲಿನಿಂದ ಒದ್ದರು. ಕೊನೆಗೆ ಬೆನ್ನಿಗೆ ಹಲ್ಲೆ ನಡೆಸಿದರು. ಪಿಎಸ್ಸೈ ಮಾದೇಶ ಕೂಡ ಹಲ್ಲೆ ನಡೆಸಿದ್ದಾರೆ. ಅಲ್ಲದೆ, ಜೀವ ಬೆದರಿಕೆ ಹಾಕಿದ್ದಾರೆ’ ಎಂದು ಸಂತ್ರಸ್ತನು ‘ವಾರ್ತಾಭಾರತಿ’ಗೆ ಮಾಹಿತಿ ನೀಡಿದ್ದಾರೆ.
‘ಹಲ್ಲೆಯಿಂದ ಸ್ಥಳದಲ್ಲೇ ತೀವ್ರ ಅಸ್ತವಸ್ಥಗೊಂಡೆ. ಬಳಿಕ ಪೊಲೀಸರು ಶಿರಸಿಯ ನ್ಯೂ ಮಾರ್ಕೆಟ್ ಪೊಲೀಸ್ ಠಾಣೆಗೆ ಜೀಪ್ನಲ್ಲಿ ಕರೆದೊಯ್ದು ನನ್ನ ವಿರುದ್ಧ ಕೇಸು ದಾಖಲಿಸಿದ್ದಾರೆ. ಅಲ್ಲದೆ, ಆರು ತಿಂಗಳ ಹಿಂದೆ ಶಿರಸಿಯ ಕೋಟೆಕೆರೆಯಲ್ಲಿ ನಡೆದಿದ್ದ ಘಟನೆಗೆ ಸಂಬಂಧಿಸಿದಂತೆಯೂ ಮತ್ತೊಂದು ಕೇಸು ದಾಖಲಿಸಿದ್ದಾರೆ. ಆ ಘಟನೆಗೂ ನನಗೂ ಸಂಬಂಧವಿಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.
‘ಅಸ್ವಸ್ಥಗೊಂಡಿದ್ದ ತನ್ನನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸದೇ ತಹಶೀಲ್ದಾರ್ ಕೋರ್ಟ್ಗೆ ಹಾಜರುಪಡಿಸಿದರು. ನ್ಯಾಯಮೂರ್ತಿಯವರಲ್ಲಿ ಪೊಲೀಸರು ನಡೆಸಿದ ಹಲ್ಲೆ ಬಗ್ಗೆ ವಿವರಿಸಿದಾಗ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಅವಕಾಶ ನೀಡಿದರು. ಅಲ್ಲಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆಯುತ್ತಿದ್ದೇನೆ’ ಎಂದು ಸಂತ್ರಸ್ತ ಹೇಳಿದ್ದಾರೆ.
ಐಪಿಸಿ ಸೆಕ್ಷನ್ 110 (ಕಳ್ಳತನ) ಪ್ರಕಾರ ಆರೋಪಿ ಮುಸನ್ನಿಫ್ ರಾಣೆಬೆನ್ನೂರು ಎಂಬವರ ವಿರುದ್ಧ ಶಿರಸಿಯ ನ್ಯೂ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಸೋಮವಾರ ಪ್ರಕರಣ ದಾಖಲಾಗಿದೆ. ಪೊಲೀಸ್ ಅಧಿಕಾರಿಗಳು ಹಲ್ಲೆ ನಡೆಸಿದ್ದಾರೆನ್ನುವುದು ಸುಳ್ಳು. ಕೇವಲ ವಿಚಾರಣೆ ನಡೆಸಿದ್ದೆವು.
- ಗಿರೀಶ್ ಭಟ್, ಸರ್ಕಲ್ ಪೊಲೀಸ್ ಇನ್ಸ್ಪೆಕ್ಟರ್, ಶಿರಸಿ