ಅ.17: ಅಕ್ಷರದಾಸೋಹ ನೌಕರರಿಂದ ರಾಜ್ಯವ್ಯಾಪಿ ಪ್ರತಿಭಟನೆ
ಮಂಗಳೂರು, ಅ.16: ಅಕ್ಷರದಾಸೋಹ ನೌಕರರಿಗೆ ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಮಾನ್ಧನ್ ಪಿಂಚಣಿ ಯೋಜನೆಯನ್ನು ಅಳವಡಿಸದೆ ಈಗಾಗಲೇ ಇರುವಂತಹ ಎಲ್ಐಸಿಯ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಬೇಕೆಂದು ಒತ್ತಾಯಿಸಿ ರಾಜ್ಯವ್ಯಾಪಿ ಪ್ರತಿಭಟನೆ ನಡೆಯುತ್ತಿದೆ. ಅದರ ಭಾಗವಾಗಿ ಅ.17ರಂದು ದ.ಕ. ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ ಸಿಐಟಿಯು ನೇತೃತ್ವದಲ್ಲಿ ಪ್ರತಿಭಟನಾ ಪ್ರದರ್ಶನ ನಡೆಯಲಿದೆ.
ಮಂಗಳೂರಿನಲ್ಲಿ ಮಧ್ಯಾಹ್ನ 2 ಗಂಟೆಗೆ ಸರಿಯಾಗಿ ಮಿನಿವಿಧಾನ ಸೌಧದ ಬಳಿಯಿಂದ ಮೆರವಣಿಗೆ ಹೊರಟು ಜಿಲ್ಲಾಧಿಕಾರಿ ಕಚೇರಿಯ ಮುಂಭಾಗ ಪ್ರತಿಭಟನಾ ಪ್ರದರ್ಶನ ನಡೆಸಿ ಜಿಲ್ಲಾಧಿಕಾರಿ ಮುಖಾಂತರ ರಾಜ್ಯ ಸರಕಾರಕ್ಕೆ ಅಕ್ಷರದಾಸೋಹ ನೌಕರರು ಮನವಿ ಸಲ್ಲಿಸಲಿದ್ದಾರೆ.
ಈಗಾಗಲೇ ಅಕ್ಷರದಾಸೋಹ ನೌಕಕರಿಂದ 100 ರೂ. ಹಾಗೂ ಎಲ್ಐಸಿಯಿಂದ 100 ರೂ. ಹಾಕಿ ಚಾಲ್ತಿಯಲ್ಲಿರುವಂತಹ ಪಿಂಚಣಿ ಯೋಜನೆ ಜಾರಿಯಾಗಬೇಕಾಗಿದೆ. ಮಾನ್ಧನ್ ಪಿಂಚಣಿ ಯೋಜನೆಗೆ ಬಿಸಿಯೂಟ ನೌಕರರು ನೀಡಬೇಕಾದ ಶುಲ್ಕವು ಹೆಚ್ಚುವರಿ ಶುಲ್ಕವಾಗಿದೆ. ಅದು 60 ವರ್ಷದ ನಂತರ ಬಿಸಿಯೂಟ ನೌಕರರಿಗೆ ಪಿಂಚಣಿ ಸಿಗುವಂತಹ ಯೋಜನೆಯಾಗಿದೆ. 18 ವರ್ಷ ತುಂಬಿದ ಫಲಾನುಭವಿಗಳು ತಮ್ಮ 40ನೇ ವಯಸ್ಸಿನವರೆಗೆ ಮಾಸಿಕ 55 ರೂ.ನ್ನು ನಿರ್ದಿಷ್ಟ ಖಾತೆಗೆ ಪಾವತಿಸುವುದು. ಗರಿಷ್ಠ 40 ವರ್ಷದ ವೇಳೆಗೆ 200 ರೂ.ಯಂತೆ ಮೊತ್ತವನ್ನು ಪಾವತಿಸಬೇಕಾಗುತ್ತದೆ. ಇದು ಬಿಸಿಯೂಟ ಕಾರ್ಮಿಕರಿಗೆ ಹೆಚ್ಚುವರಿ ಹೊರೆಯಾಗಿದೆ. ಪ್ರತಿಭಟನಾ ಪ್ರದರ್ಶನ ನಡೆಸಿ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಕರ್ನಾಟಕ ರಾಜ್ಯ ಅಕ್ಷರದಾಸೋಹ ನೌಕರರ ಸಂಘದ ಜಿಲ್ಲಾ ಅಧ್ಯಕ್ಷೆ ಪದ್ಮಾವತಿ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಗಿರಿಜಾ ಮೂಡುಬಿದಿರೆ, ಖಜಾಂಚಿ ಭವ್ಯಾ ಜಂಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.