ಎರಡು ದಿನದ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಪತ್ತೆ
ಉಪ್ಪಿನಂಗಡಿ: ಎರಡು ದಿನದ ಹಿಂದೆ ನಾಪತ್ತೆಯಾಗಿದ್ದ ಗೋಳಿತ್ತೊಟ್ಟು ನಿವಾಸಿ ಮೇದಪ್ಪ ಗೌಡ (56)ರವರ ಮೃತದೇಹ ಉಪ್ಪಾರಹಳ್ಳ ಹೊಳೆಯ ಕನಿಯಗುಂಡಿ ಎಂಬಲ್ಲಿ ಇಂದು ಮಧ್ಯಾಹ್ನದ ವೇಳೆಗೆ ಪತ್ತೆಯಾಗಿದೆ.
ಗೋಳಿತ್ತೊಟ್ಟು ಗ್ರಾಮದ ಕೊಂಕೋಡಿ ನಿವಾಸಿ, ಕೃಷಿಕ, ಕೂಲಿಕಾರ್ಮಿಕರೂ ಆಗಿದ್ದ ಮೇದಪ್ಪ ಗೌಡರವರು ಅ.15ರಂದು ಸಂಜೆ ಕೊಕ್ಕಡ ಗ್ರಾಮದ ಬಲಿಪಗುಡ್ಡೆಯಲ್ಲಿರುವ ಸಹೋದರಿ ಮೀನಾಕ್ಷಿಯವರ ಮನೆಗೆಂದು ಹೋದವರು ಸಹೋದರಿಯ ಮನೆಗೂ ಹೋಗದೇ, ತನ್ನ ಮನೆಗೂ ವಾಪಸ್ ಆಗದೇ ನಾಪತ್ತೆಯಾಗಿದ್ದರು.
ಅ.15ರಂದು ಸಂಜೆ ಭಾರೀ ಮಳೆಯ ಸಂದರ್ಭದಲ್ಲೇ ಮೇದಪ್ಪ ಗೌಡರವರು ಕೋಲ್ಪೆ-ಬೊಳ್ಳರ್ಪು ರಸ್ತೆಯ ಮೂಲಕ ಬಲಿಪಗುಡ್ಡೆಯಲ್ಲಿರುವ ಸಹೋದರಿಯ ಮನೆಗೆಂದು ಹೋಗಿದ್ದು ಬೊಳ್ಳರ್ಪು ಎಂಬಲ್ಲಿ ಉಪ್ಪಾರಹಳ್ಳ ಹೊಳೆ ದಾಟುವ ವೇಳೆ ಹೊಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿರಬಹುದೆಂಬ ಶಂಕೆಯ ಮೇರೆಗೆ ಅ.16ರಂದು ಸಂಜೆ ತನಕವೂ ಮೇದಪ್ಪ ಗೌಡರ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಸೇರಿಕೊಂಡು ಹೊಳೆ ಬದಿ ಸೇರಿದಂತೆ ವಿವಿಧೆಡೆ ಹುಡುಕಾಟ ನಡೆಸಿದ್ದರೂ ಯಾವುದೇ ಸುಳಿವು ದೊರೆತಿರಲಿಲ್ಲ.
ಅ.17ರಂದು ಮತ್ತೆ ಹುಡುಕಾಟ ನಡೆಸಿದ ವೇಳೆ ಮೇದಪ್ಪ ಗೌಡರ ಮೃತದೇಹ ಉಪ್ಪಾರಹಳ್ಳ ಹೊಳೆಯ ಕನಿಯಗುಂಡಿ ಎಂಬಲ್ಲಿ ಪತ್ತೆಯಾಗಿದೆ. ಮಳೆಯಿಂದಾಗಿ ತುಂಬಿ ಹರಿಯುತ್ತಿದ್ದ ಹೊಳೆಯನ್ನು ದಾಟುವ ವೇಳೆ ಮೇದಪ್ಪ ಗೌಡರವರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿರಬಹುದೆಂದು ಶಂಕಿಸಲಾಗಿದೆ.