ಸಿಪಿಐಎಂನಿಂದ ಕಮ್ಯೂನಿಸ್ಟ್ ಪಕ್ಷದ ಶತಮಾನೋತ್ಸವ ಆಚರಣೆ
ಉಡುಪಿ, ಅ.18: ಭಾರತ ಕಮ್ಯೂನಿಸ್ಟ್ ಪಕ್ಷ(ಮಾರ್ಕ್ಸ್ ವಾದಿ) ಉಡುಪಿ ಜಿಲ್ಲಾ ಸಮಿತಿಯ ವತಿಯಿಂದ ಕಮ್ಯೂನಿಸ್ಟ್ ಪಕ್ಷದ ಶತಮಾನೋತ್ಸವವನ್ನು ಗುರುವಾರ ಉಡುಪಿಯಲ್ಲಿ ಆಚರಿಸಲಾಯಿತು.
ಪಕ್ಷದ ಧ್ವಜಾರೋಹಣವನ್ನು ನೆರವೇರಿಸಿದ ಪಕ್ಷದ ಹಿರಿಯ ಮುಖಂಡ ಪಿ. ವಿಶ್ವನಾಥ ರೈ ಮಾತನಾಡಿ, 2020ರ ಅಕ್ಟೋಬರ್ 17ರವರೆಗೆ ಪಕ್ಷವು ವಿವಿಧ ರೀತಿಯಲ್ಲಿ ಶತಮಾನೋತ್ಸವವನ್ನು ಆಚರಿಸಲಿದೆ ಎಂದು ತಿಳಿಸಿದರು.
ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಮಾತನಾಡಿ, ಭಾರತದ ಕಮ್ಯೂನಿಸ್ಟ್ ಪಕ್ಷದ ಐವರು ಮುಖಂಡರು 1920ರಲ್ಲಿ ತಾಷ್ಕೆಂಟ್ನಲ್ಲಿ ಸೇರಿರುವ ಸಭೆಯು ಅಧಿಕೃತ ಸಭೆಯಾಗಿದೆ. ಭಾರತದ ಜನರ ರಕ್ಷಣೆ ಎಡಪಂಥದಿಂದ ಮಾತ್ರವೇ ಸಾಧ್ಯ. ಆ ನಿಟ್ಟಿನಲ್ಲಿ ಜನರ ಸಮಸ್ಯೆಗಳ ವಿರುದ್ಧ ಹೋರಾಟ ತೀವ್ರಗೊಳಿಸಬೇಕಾಗಿದೆ ಎಂದು ಅಭಿಪ್ರಾಯ ಪಟ್ಟರು.
ಸಿಪಿಐಎಂ ಪಕ್ಷದ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಕೆ.ಶಂಕರ್ ಮಾತನಾಡಿದರು. ಈ ಸಂದರ್ಭದಲ್ಲಿ ಸಿಪಿಎಂ ಮುಖಂಡರಾದ ಎಚ್. ನರಸಿಂಹ, ಸುರೇಶ್ ಕಲ್ಲಾಗರ, ವೆಂಕಟೇಶ್ ಕೋಣಿ, ಶಶಿಧರ ಗೊಲ್ಲ, ಬಲ್ಕೀಸ್ ಕುಂದಾಪುರ, ಕವಿರಾಜ್ ಮೊದಲಾದವರು ಉಪಸ್ಥಿತರಿದ್ದರು.