ನ.1ರಿಂದ ಅಲೋಶಿಯಸ್ನಲ್ಲಿ ಮಾದರಿ ಕಾರ್ಯಕ್ರಮ
ಮಂಗಳೂರು, ಅ.19: ನಗರದ ಸಂತ ಅಲೋಶಿಯಸ್ ಪದವಿ ಪೂರ್ವ ಕಾಲೇಜು ವತಿಯಿಂದ ನವೆಂಬರ್ 1ರಿಂದ 3ರವರೆಗೆ ಅಲೋಶಿಯಸ್ ಕಾಲೇಜಿನ ಲಯೋಲಾ ಸಭಾಂಗಣದಲ್ಲಿ ವಿಶ್ವ ಸಂಸ್ಥೆಯ ಕಾರ್ಯವೈಖರಿಯ ಕುರಿತು ಮಾಹಿತಿ ನೀಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಸಂಸ್ಥೆ ಹಣಕಾಸು ಅಧಿಕಾರಿ ರೆ.ಫಾ.ವಿನೋದ್ ಪಾಲ್ ಎಸ್.ಜೆ. ತಿಳಿಸಿದ್ದಾರೆ.
ನಗರದ ಪ್ರೆಸ್ಕ್ಲಬ್ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನ.1ರಂದು ಸಂಜೆ 4:30ಕ್ಕೆ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದ್ದು, ಪಾರ್ ಇಕೋ ಸೊಲ್ಯೂಶನ್ಸ್ನ ಸಹ ಸಂಸ್ಥಾಪಕ ರಕ್ಷಿತ್ ಶೆಟ್ಟಿ ಭಾಗವಹಿಸುವರು. ನ.3ರಂದು ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ದೇಶದ ವಿವಿಧ ಭಾಗಗಳಿಂದ ಸುಮಾರು 400 ಮಂದಿ ಅತಿಥಿಗಳು ಪಾಲ್ಗೊಳ್ಳಲಿದ್ದಾರೆ. ವಿಶ್ವ ಸಂಸ್ಥೆಯ ಕಾರ್ಯ ವಿಧಾನಗಳು ಹೇಗಿರುತ್ತವೆ ಮತ್ತು ಕಾರ್ಯಚಟುವಟಿಕೆಗಳ ಕುರಿತು ಮಾಹಿತಿ ನೀಡಲು ಈ ಕಾರ್ಯಕ್ರಮ ಸಂಯೋಜಿಸಲಾಗಿದೆ. ಚರ್ಚೆ, ಸಂವಾದಗಳು, ಉಪನ್ಯಾಸ ಇತ್ಯಾದಿ ಇದ್ದು, ವಿದ್ಯಾರ್ಥಿಗಳಿಗೆ ವಿಶ್ವಸಂಸ್ಥೆಯ ಕುರಿತು ಸಂಪೂರ್ಣ ಚಿತ್ರಣವೂ ಈ ಮೂಲಕ ದೊರೆಯಲಿದೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮ ಸಂಘಟಕರಾದ ಮ್ಯಾಕ್ಸಿನ್ ಡಿಸಿಲ್ವಾ, ಸಂಜೀತ್ ರೊಡ್ರಿಗಸ್, ಅಜಾಮ್ ಇಬ್ರಾಹೀಂ, ಅಧ್ಯಕ್ಷೆ ಲತೀಶಾ ಡಿಕೋಸ್ತಾ ಉಪಸ್ಥಿತರಿದ್ದರು.