ಯೋಗವು ಸಾರ್ವತ್ರಿಕ, ಸಾರ್ವಕಾಲಿಕ: ಪಲಿಮಾರು ಸ್ವಾಮೀಜಿ
ಉಡುಪಿ, ಅ. 20: ಯೋಗವು ಸಾರ್ವಕಾಲಿಕ ಮತ್ತು ಸಾರ್ವತ್ರಿಕ ಮಹತ್ವ ಹೊಂದಿದೆ. ಯೋಗದಲ್ಲಿ ಒಬ್ಬರ ಪರವಾಗಿ ಒಬ್ಬರು ಪಾಲ್ಗೊಂಡು ಅದರ ಲಾಭ ಪಡೆಯಲು ಸಾಧ್ಯವಿಲ್ಲ. ಪ್ರತಿಯೊಬ್ಬರು ಇದರಲ್ಲಿ ಭಾಗಿಯಾದಾಗ ಮಾತ್ರ ಆರೋಗ್ಯವಂತರಾಗಲು ಸಾಧ್ಯ ಎಂದು ಪರ್ಯಾಯ ಪಲಿಮಾರು ಮಠಾಧೀಶ ಶ್ರೀವಿದ್ಯಾಧೀಶತೀರ್ಥ ಸ್ವಾಮೀಜಿ ಹೇಳಿದ್ದಾರೆ.
ರಾಮ್ದೇವ್ ನೇತೃತ್ವದಲ್ಲಿ ಉಡುಪಿಯಲ್ಲಿ ನ.16ರಿಂದ 20ರವರೆಗೆ ನಡೆ ಯುವ ಯೋಗ ಶಿಬಿರದ ಪೂರ್ವಭಾವಿಯಾಗಿ ಶ್ರೀಕೃಷ್ಣಮಠದ ಕನಕಮಂಟಪ ದಲ್ಲಿ ರವಿವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ಕರ್ನಾಟಕದ ಪತಂಜಲಿ ಯೋಗ ಸಮಿತಿ ರಾಜ್ಯ ಪ್ರಭಾರಿ ಭವರ್ಲಾಲ್ ಆರ್ಯ ಮಾತನಾಡಿ, ಬಾಬಾ ರಾಮ್ದೇವ್ ಈವರೆಗೆ 2.5 ಕೋಟಿ ಜನರಿಗೆ ಯೋಗದ ಅಭ್ಯಾಸ ಮಾಡಿಸಿದ್ದಾರೆ. ಉಡುಪಿಯಲ್ಲಿ ನಡೆಯುವ ಯೊಗೋತ್ಸವವನ್ನು ಆನಂದೋತ್ಸವವಾಗಿ ಪರಿವರ್ತಸಿಬೇಕು. ಈಗಾಗಲೇ ಏಳು ಶಿಕ್ಷಕರು ವಿವಿಧೆಡೆ ಶಿಬಿರಗಳನ್ನು ನಡೆಸಿದ್ದಾರೆ. ನ.1ರಿಂದ ರಾಜ್ಯದ ವಿವಿಧೆಡೆಗಳಲ್ಲಿರುವ ಯೋಗ ಶಿಕ್ಷಕರು ಉುಪಿಗೆ ಆಗಮಿಸಲಿರುವರು ಎಂದರು.
ಪತಂಜಲಿ ಸಮಿತಿ ಜಿಲ್ಲಾಧ್ಯಕ್ಷ ಕರಂಬಳ್ಳಿ ಶಿವರಾಮ ಶೆಟ್ಟಿ ಮಾತನಾಡಿ, ಜಿಲ್ಲೆಯಲ್ಲಿ ಕನಿಷ್ಠ 101 ಶಿಬಿರಗಳನ್ನು ನಡೆಸುವ ಗುರಿ ಹೊಂದಲಾಗಿದೆ. ಈಗಾಗಲೇ 34 ಕಡೆ ಶಿಬಿರಗಳು ನಡೆದಿವೆ. 2011ರಲ್ಲಿ ನಡೆದ ಯೋಗ ಶಿಬಿರದಂತೆ ಈ ಬಾರಿಯು ಸಿಟಿ ಬಸ್ ಮಾಲಕರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಸಂರಕ್ಷಕ ಬಾಲಾಜಿ ರಾಘವೇಂದ್ರ ಆಚಾರ್ಯ, ಆರೆಸ್ಸೆಸ್ ಮುಖಂಡ ಟಿ.ಶಂಭು ಶೆಟ್ಟಿ, ಉದ್ಯಮಿ ಹರಿಯಪ್ಪ ಕೋಟ್ಯಾನ್, ಮಟ್ಟು ಲಕ್ಷ್ಮೀನಾರಾಯಣ ಮಾತನಾಡಿದರು. ಪತಂಜಲಿ ಸಮಿತಿ ರಾಜ್ಯ ಸಹಪ್ರಭಾರಿ ಡಾ.ಜ್ಞಾನೇಶ್ವರ ನಾಯಕ್, ಮಹಿಳಾ ವಿಭಾಗದ ರಾಜ್ಯ ಅಧ್ಯಕ್ಷೆ ಸುಜಾತಾ ಮಾರ್ಲ, ಜಿಲ್ಲಾಧ್ಯಕ್ಷೆ ಲೀಲಾ ಅಮೀನ್ ಉಪಸ್ಥಿತರಿದ್ದರು. ಮಠದ ಆಡಳಿತಾಧಿಕಾರಿ ಪ್ರಹ್ಲಾದ ರಾವ್ ಕಾರ್ಯಕ್ರಮ ನಿರೂಪಿಸಿದರು.