ಮಂಗಳೂರು: ತಮಿಳುನಾಡು ಮೂಲದ ವ್ಯಾಪಾರಿ ನಾಪತ್ತೆ
ಮಂಗಳೂರು, ಅ.21: ಬಟ್ಟೆ ವ್ಯಾಪರ ನಿಮಿತ್ತ ಮಂಗಳೂರಿಗೆ ಬಂದಿದ್ದ ತಮಿಳುನಾಡು ಕಾಂಚಿಪುರಂ ತಿರುಕಾಳಿ ಮೇಡುವಿನ ಮೂಲದ ಕುಮಾರ (35) ಎಂಬವರು ನಾಪತ್ತೆಯಾಗಿದ್ದಾರೆ. ವಾರದ ಹಿಂದೆ ಬುಕ್ಮಾಡಿದ್ದ ಮದುವೆ ಸೀರೆಯನ್ನು ನೀಡಲೆಂದು ಅ.19ರಂದು ಬೆಳಗ್ಗೆ ಮಾಲಕರೊಂದಿಗೆ ಕಾರಿನಲ್ಲಿ ಬಂದಿದ್ದು, ಕರಂಗಲಪಾಡಿಯ ಹೊಟೇಲ್ ಒಂದರಲ್ಲಿ ರೂಮ್ ಮಾಡಿದ್ದರು.
ಅಂದು ರಾತ್ರಿ 11:30ರ ವೇಳೆಗೆ ಕಾರು ಚಾಲಕ ರಾಮ್ ಕುಮಾರ್ ಅವರೊಂದಿಗೆ ಬೀಡಿ ಹುಡುಕುತ್ತಾ ಬಂಟ್ಸ್ ಹಾಸ್ಟೆಲ್ನಿಂದ ಕದ್ರಿ ರಸ್ತೆಯ ಭಾರತ್ ಬೀಡಿ ಕಂಪೆನಿವರೆಗೆ ಹೋಗಿದ್ದು, ಕುಮಾರ್ ಅಲ್ಲಿಂದ ಮುಂದಕ್ಕೆ ಹೋದವರು ವಾಪಸ್ ಬಾರದೆ ನಾಪತ್ತೆಯಾಗಿದ್ದಾರೆ.
ಮರಳಿ ರೂಂಗೆ ಬರಬಹುದು ಎಂದು ಬೆಳಗ್ಗೆವರೆಗೆ ಕಾದರೂ ಬಂದಿಲ್ಲ. ನಗರದೆಲ್ಲೆಡೆ ಹುಡುಕಿದರೂ ಪತ್ತೆಯಾಗಿಲ್ಲ. ಈ ಕುರಿತು ಮಂಗಳೂರು ನಗರ ಉತ್ತರ (ಬಂದರ್) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಹರೆ: ಕುಮಾರ್ 5.6 ಅಡಿ ಎತ್ತರ, ಎಣ್ಣೆ ಕಪ್ಪು ಮೈಬಣ್ಣ, ಸಪೂರ ಶರೀರ, ತಮಿಳು ಭಾಷೆ ಬಲ್ಲವರಾಗಿದ್ದಾರೆ. ಬಿಳಿ ಬಣ್ಣದ ಗೆರೆಗಳಿರುವ ಅರ್ಧ ತೋಳಿನ ಶರ್ಟ್, ನೀಲಿ ಬಣ್ಣದ ಚೆಕ್ಸ್ ಲುಂಗಿ ಧರಿಸಿದ್ದಾರೆ. ಈತ ಪತ್ತೆಯಾದಲ್ಲಿ ಪೊಲೀಸ್ ಆಯುಕ್ತರ ಕಚೇರಿ 0824-2220801ನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.