ಚಿತ್ರಕಲೆ ಚಿಕಿತ್ಸೆಯಿಂದ ಮನಸ್ಸಿನ ನಿಯಂತ್ರಣ ಸಾಧ್ಯ: ಡಾ.ಭಂಡಾರಿ
ಮಣಿಪಾಲ, ಅ.21: ಚಿತ್ರಕಲೆ ಚಿಕಿತ್ಸೆಯು ಬೇಸರವನ್ನು ನಿವಾರಿಸಲು ಮತ್ತು ಮನಸ್ಸನ್ನು ನಿಯಂತ್ರಿಸಲು ಸಹಕಾರಿಯಾಗಿದೆ. ಕೈ, ಕಣ್ಣಿನ ಸಮನ್ವಯ, ಅರಿವಿನ ಸಾಮರ್ಥ್ಯಗಳನ್ನು ಮತ್ತು ಏಕಾಗ್ರತೆಗೆ ಸಹಾಯ ಮಾಡುತ್ತದೆ ಎಂದು ಮಾನಸಿಕ ತಜ್ಞ ಡಾ.ಪಿ.ವಿ.ಭಂಡಾರಿ ಹೇಳಿದ್ದಾರೆ.
ಉಡುಪಿ -ಮಣಿಪಾಲ ಪ್ರಶಾ ಸೇವಾ ಟ್ರಸ್ಟ್ ಹಾಗೂ ತ್ರಿವರ್ಣ ಕಲಾ ಕೇಂದ್ರದ ಸಹಯೋಗದಲ್ಲಿ ರವಿವಾರ ಕೇಂದ್ರದಲ್ಲಿ 30ವರ್ಷಕ್ಕಿಂತ ಮೇಲ್ಪಟ್ಟ ಕಲಾಸಕ್ತರಿಗಾಗಿ ಆಯೋಜಿಸಲಾದ ಚಿತ್ರಕಲಾ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕಲಾತ್ಮಕ ಚಟುವಟಿಕೆಗಳು ತಮ್ಮ ಕಲ್ಪನಾ ಪ್ರತಿಭೆಯನ್ನು ಪ್ರದರ್ಶಿಸಲು ಮತ್ತು ಇತರರೊಂದಿಗೆ ಸಂಪರ್ಕ ಸಾಧಿಸಲು ಅವಕಾಶ ನೀಡುತ್ತದೆ. ಇಂತಹ ಚಟು ವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಮನಸ್ಸಿಗೆ ಸಂತೋಷ ಮತ್ತು ತೃಪ್ತಿ ಸಿಗುತ್ತದೆ. ಇದು ನಮ್ಮಲ್ಲಿ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಯಾಗಿ ಉಡುಪಿ ಚಿತ್ರಕಲಾ ಮಂದಿರ ಕಲಾ ವಿದ್ಯಾ ಮಂದಿರದ ನಿರ್ದೇಶಕ ಡಾ.ಯು.ಸಿ.ನಿರಂಜನ್ ಮಾತನಾಡಿದರು. ಚಿತ್ರಕಲೆ ಪ್ರಾಥಮಿಕ ಜ್ಞಾನ ಹಾಗೂ ರಚನೆ ಕುರಿತು ಕೇಂದ್ರದ ನಿರ್ದೇಶಕ ಹರೀಶ್ ಸಾಗ ಮತ್ತು ಜಲವರ್ಣ ಬಳಕೆ ಕುರಿತು ಭವನ ಫೌಂಡೇಶನ್ನ ನಿರ್ದೇಶಕ ಜನಾರ್ದನ್ ಹಾವಂಜೆ ಮಾಹಿತಿ ನೀಡಿದರು.
ಪ್ರಶಾ ಸೇವಾ ಟ್ರಸ್ಟ್ನ ಅಧ್ಯಕ್ಷ ಡಿ.ವಿ.ಶೆಟ್ಟಿಗಾರ್ ವಂದಿಸಿದರು. ಕೋಶಾಧಿ ಕಾರಿ ಡಾ.ವಸುಧಾ ದೇವಿ ಅತಿಥಿಗಳನ್ನು ಪರಿಚಯಿಸಿದರು. ಕಾರ್ಯದರ್ಶಿ ನಾಗರಾಜ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಾಗಾರದಲ್ಲಿ 30ರಿಂದ 74ವರ್ಷದವರೆಗಿನ 32ಮಂದಿ ಭಾಗವಹಿಸಿ ಪ್ರಯೋಜನ ಪಡೆದುಕೊಂಡರು.