ಬಂಟ್ವಾಳ ತಾಲೂಕು ಮಟ್ಟದ ಕಲಾಶ್ರೀ ಪ್ರಶಸ್ತಿ ಆಯ್ಕೆ ಶಿಬಿರ
ಬಂಟ್ವಾಳ, ಅ.22: ಕಲಾಶ್ರೀ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಭಾಗವಹಿಸುವ ಪ್ರತಿಭೆಗಳಿಗೆ ತಾಲೂಕು ಮಟ್ಟದಲ್ಲಿಯೇ ಸೂಕ್ತ ವೇದಿಕೆ ನಿರ್ಮಾಣವಾಗಬೇಕಾಗಿದೆ ಎಂದು ಬಂಟ್ವಾಳ ಶಾಸಕ ಯು.ರಾಜೇಶ್ ನಾಯ್ಕ್ ಅಭಿಪ್ರಾಯಿಸಿದ್ದಾರೆ
ಮಹಿಳಾ ಮತ್ತು ಮಕ್ಕಳ ಇಲಾಖೆ ಮತ್ತು ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಬಂಟ್ವಾಳ ಹಾಗೂ ಬಂಟ್ವಾಳ ತಾಲೂಕು ಬಾಲಭವನ ಸಮಿತಿಯ ಜಂಟಿ ಆಶ್ರಯದಲ್ಲಿ ಸೋಮವಾರ ಬಿ.ಸಿ.ರೋಡಿನ ಸ್ತೀಶಕ್ತಿ ಭವನದಲ್ಲಿ ಆಯೋಜಿಸಲಾಗಿದ್ದ 2019ನೇ ಸಾಲಿನ ತಾಲೂಕು ಮಟ್ಟದ ಕಲಾಶ್ರೀ ಪ್ರಶಸ್ತಿ ಆಯ್ಕೆ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು.
ನಮ್ಮಲ್ಲಿ ವಿಶೇಷ ಪ್ರತಿಭೆಗಳನ್ನು ಹೊಂದಿರುವ ಮಕ್ಕಳಿದ್ದು, ಇಂತಹವರಿಗೆ ತಳ ಮಟ್ಟದಲ್ಲಿಯೇ ಉತ್ತಮ ವೇದಿಕೆ ಕಲ್ಪಿಸಬೇಕಾಗಿದೆ. ಆಗ ಮಾತ್ರ ವಿದ್ಯಾರ್ಥಿಗಳಿಗೆ ವೇದಿಕೆ ಭಯ ದೂರವಾಗಲು ಸಾಧ್ಯ ಎಂದ ಅವರು, ಕಲಾಶ್ರೀಯಂತಹ ಕಾರ್ಯಕ್ರಮಗಳು ಪ್ರತೀ ಶಾಲೆಗಳಲ್ಲಿ ವಿಸ್ತರಿಸಬೇಕಾಗಿದೆ ಎಂದರು.
ಪ್ರಚಲಿತ ದಿನಗಳಲ್ಲಿ ಪ್ರತಿಭೆಗಳಿಗೆ ಅವಕಾಶವಿದ್ದು, ಸ್ಪರ್ಧಾತ್ಮಕವಾಗಿದೆ. ವೇದಿಕೆಯಲ್ಲಿ ಪ್ರತಿಭೆಯನ್ನು ತೋಪರ್ಡಿಸುವುದು ಮಾತ್ರವಾಗಿರದೇ ವೀಕ್ಷಕರನ್ನು ಎದುರಿಸುವ ತರಬೇತಿಯನ್ನು ಕೂಡಾ ಮಕ್ಕಳಿಗೆ ನೀಡಬೇಕಾಗಿದೆ ಅವರು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬಂಟ್ವಾಳ ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ ಮಾತನಾಡಿ ಶುಭ ಹಾರೈಸಿದರು.
ವೇದಿಕೆಯಲ್ಲಿ ತಾಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ, ಸ್ಥಾಯಿ ಸಮಿತಿಯ ಅಧ್ಯಕ್ಷೆ ಧನಲಕ್ಷ್ಮೀ ಸಿ.ಬಂಗೇರ, ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್, ಶಿಕ್ಷಕ ರಾಮಚಂದ್ರ ಉಪಸ್ಥಿತರಿದ್ದರು.
ವಿಟ್ಲ ಸಿಡಿಪಿಒ ಸುಧಾ ಜೋಶಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಶು ಅಭಿವೃದ್ಧಿಯ ಯೋಜನಾಧಿಕಾರಿ ಶ್ರೀಲತಾ ಎಸ್. ಸ್ವಾಗತಿಸಿದರು. ಹಿರಿಯ ಮೇಲ್ವಿಚಾರಕಿ ಗಾಯತ್ರಿ ಕಂಬಳಿ ವಂದಿಸಿದರು. ಹಿರಿಯ ಮೇಲ್ವಿಚಾರಕಿ ಭಾರತಿ ಕುಂದರ್ ಕಾರ್ಯಕ್ರಮ ನಿರೂಪಿಸಿದರು.
ಪತ್ರಕರ್ತರಾದ ಸಂದೀಪ್ ಸಾಲ್ಯಾನ್, ಗೋಪಾಲ್ ಅಂಚನ್, ಶಿಕ್ಷಕರಾದ ವಿಠಲ ನಾಯ್ಕ್, ರಾಮಚಂದ್ರ ರಾವ್, ಚಿತ್ರಕಲಾ ಶಿಕ್ಷಕರಾದ ಚೆನ್ನಕೇಶವ, ಮುರಳಿಕೃಷ್ಣ ತೀರ್ಪುಗಾರರಾಗಿ ಸಹಕರಿಸಿದರು.