ಮಣಿಪಾಲ: ಔಷಧದ ವ್ಯತಿರಿಕ್ತ ಪರಿಣಾಮ ತಿಳಿಯಲು ಆ್ಯಂಡ್ರಾಯ್ಡ್ ಆ್ಯಪ್
ಮಣಿಪಾಲ, ಅ.23:ರೋಗಿಯೊಬ್ಬನಿಗೆ ನೀಡಿದ ಔಷಧ ಆತನ ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದರೆ, ತಕ್ಷಣ ಅದನ್ನು ಗುರುತಿಸಿ ಆತನ ರಕ್ಷಣೆಗೆ ಸೂಚನೆ ನೀಡುವ ಆ್ಯಂಡ್ರಾಯ್ಡಾ ಆ್ಯಪ್ ಒಂದನ್ನು ಕೆಎಂಸಿ ಮಣಿಪಾಲದ ಫಾರ್ಮಕಾಲಜಿ ವಿಭಾಗ ಹಾಗೂ ಎಂಐಟಿಯ ಮಾಹಿತಿ ಮತ್ತು ಸಂವಹನ ವಿಭಾಗವು ಅಭಿವೃದ್ಧಿ ಪಡಿಸಿದೆ.
‘ಅಡ್ರಿಯಾ’ (ಎಡಿಆರ್ಆರ್ಐಎ- ಎಡ್ವರ್ಸ್ ಡ್ರಗ್ ರಿಯ್ಯಿಕ್ಷನ್ ರಿಪೋ ರ್ಟಿಂಗ್, ಐಡೆಂಟಿಪಿಕೇಷನ್ ಎಂಡ್ ಅಸೆಸ್ಮೆಂಟ್) ಎಂದು ಕರೆಯ ಲಾಗುವ ಈ ಆ್ಯಪ್ಗೆ ಮಾಹೆಯ ಪ್ರೊ ಚಾನ್ಸಲರ್ ಡಾ.ಎಚ್. ಎಸ್.ಬಲ್ಲಾಳ್ ಹಾಗೂ ಪ್ರೊ ವೈಸ್ಚಾನ್ಸಲರ್ ಡಾ.ಪೂರ್ಣಿಮಾ ಬಾಳಿಗಾ ಮಾಹೆ ವಿವಿಯಲ್ಲಿ ಬುಧವಾರ ಚಾಲನೆ ನೀಡಿದರು.
ವಿಶಿಷ್ಟವಾದ ಈ ಆ್ಯಪ್ನ್ನು ಸೃಷ್ಟಿಸಿದವರು ಕೆಎಂಸಿ ಫಾರ್ಮಕಾಲಜಿ ವಿಭಾಗದ ಡಾ.ನವೀನ್ ಪಾಟೀಲ್ ಹಾಗೂ ಡಾ.ವೀಣಾ ನಾಯಕ್ ಮತ್ತು ಎಂಐಟಿ ಮಾಹಿತಿ ಮತ್ತು ಸಂವಹನ ವಿಭಾಗದ ಅಕ್ಷಯ್ ಎಂ.ಜಿ. ಮತ್ತು ಆರೀಫ್ ರಝಾ. ‘ಈ ಆ್ಯಪ್, ಮಾಹೆಯ ಗೌರವವನ್ನು ಇನ್ನೂ ದೊಡ್ಡ ಮಟ್ಟದಲ್ಲಿ ಬೆಳಗಿಸಲಿದೆ’ ಎಂದು ಆ್ಯಪ್ನ್ನು ಬಿಡುಗಡೆಗೊಳಿಸುತ್ತಾ ಡಾ.ಬಲ್ಲಾಳ್ ನುಡಿದರು.
ಸ್ವಲ್ಪ ಸಮಯದ ಬಳಿಕ ಈ ಆ್ಯಪ್ ಮಂಗಳೂರು, ಉಡುಪಿ ಮತ್ತು ಕಾರ್ಕಳದಲ್ಲಿರುವ ಮಣಿಪಾಲ ಆಸ್ಪತ್ರೆಗಳಿಗೂ ಲಭ್ಯವಿರುವಂತೆ ಮಾಡಲಾಗುವುದು ಎಂದು ಅವರು ನುಡಿದರು.
ಮಾಹೆಯ ಎರಡು ಸಂಸ್ಥೆಗಳಾದ ಕೆಎಂಸಿ ಮತ್ತು ಎಂಐಟಿ ಒಂದಾಗಿ ಹೊಸ ಆವಿಷ್ಕಾರ ನಡೆಸಿರುವುದನ್ನು ಪ್ರಶಂಸಿಸಿದ ಡಾ.ಪೂರ್ಣಿಮಾ ಬಾಳಿಗಾ, ಸಂಶೋಧನೆಯಲ್ಲಿ ಪರಸ್ಪರ ಹೊಂದಾಣಿಕೆ ಹಾಗೂ ಸಹಕಾರಕ್ಕೆ ಇದೊಂದು ಅತ್ಯುತ್ತಮ ಉದಾಹರಣೆಯಾಗಿದೆ. ಭವಿಷ್ಯದಲ್ಲಿ ಇಂಥ ಹೆಚ್ಚು ಹೆಚ್ಚು ಆವಿಷ್ಕಾರ ಹಾಗೂ ಸೃಜನಶೀಲತೆ ಮಾಹೆಯ ಪ್ರತಿಷ್ಠೆಯನ್ನು ವೃದ್ಧಿಸಲು ನೆರವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಎಂಐಟಿಯ ಜಂಟಿ ನಿರ್ದೇಶಕ ಡಾ.ಬಿ.ಎಚ್.ವಿ.ಪೈ, ಕೆಎಂಸಿಯ ಡೀನ್ ಡಾ.ಶರತ್ ರಾವ್, ಕಸ್ತೂರ್ಬಾ ಆಸ್ಪತ್ರೆಯ ಸಿಒಒ ಸಿ.ಜಿ. ಮುತ್ತಣ್ಣ ಹಾಗೂ ಕೆಎಂಸಿಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ಉಪಸ್ಥಿತರಿದ್ದರು.
ಆ್ಯಪ್ ಕಾರ್ಯ: ರೋಗಿಯೊಬ್ಬನಿಗೆ ಔಷಧಿಯನ್ನು ನೀಡಿದಾಗ ಅದು ಆತನಲ್ಲಿ ವ್ಯತಿರಿಕ್ತ ಪರಿಣಾಮ ಬೀರುವ (ಎಡಿಆರ್) ಸಾಧ್ಯತೆ ಇರುತ್ತದೆ. ಅದು ಔಷಧಿ ನೀಡಿದ ತಕ್ಷಣವೇ ಆಗಬಹುದು ಅಥವಾ ಸುದೀರ್ಘ ಕಾಲದ ಸೇವನೆಯಿಂದ ಅಥವಾ 2-3ವಿಧದ ಡ್ರಗ್ಸ್ ಗಳ ಸೇವನೆಯಿಂದ ಆಗಬಹುದು. ಎಡಿಆರ್ ಎಂಬುದು ರೋಗಿಯ ಅನಾರೋಗ್ಯ ಹಾಗೂ ಮರಣಕ್ಕೆ ಪ್ರಮುಖ ಕಾರಣವಾಗಿರುತ್ತದೆ ಎಂದು ಡಾ. ನವೀನ್ ಪಾಟೀಲ್ ವಿವರಿಸಿದರು.