ಕಟಪಾಡಿ ಬಳಿ ಮಹಿಳೆಯ ಬಲತ್ಕಾರಕ್ಕೆ ಯತ್ನ: ದೂರು
ಕಾಪು, ಅ.23: ಕೆಲಸ ಮುಗಿಸಿ ಮನೆಗೆ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯನ್ನು ಅಪರಿಚಿತನೊಬ್ಬ ರಸ್ತೆ ಬದಿಯ ಪೊದೆಯ ಬಳಿ ಎಳೆದೊಯ್ದು ಬಲತ್ಕಾರಕ್ಕೆ ಯತ್ನಿಸಿರುವ ಘಟನೆ ಕಟಪಾಡಿ ಅಗ್ರಹಾರದಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಉಡುಪಿಯಲ್ಲಿ ಉದ್ಯೋಗದಲ್ಲಿದ್ದ ಸ್ಥಳೀಯ ಮಹಿಳೆ ಕೆಲಸ ಮುಗಿಸಿ ತನ್ನ ಮನೆಗೆ ನಡೆದುಕೊಂಡು ಹೋಗುತ್ತಿದ್ದರೆನ್ನಲಾಗಿದೆ. ಆ ವೇಳೆ ಹಿಂದಿನಿಂದ ಬಂದ ಅಪರಿಚಿತ ವ್ಯಕ್ತಿ, ಆಕೆ ಬೊಬ್ಬೆ ಹಾಕದಂತೆ ಬಾಯಿಯನ್ನು ಒತ್ತಿ ಇಟ್ಟು ರಸ್ತೆ ಬದಿಯ ಖಾಲಿ ಜಾಗದಲ್ಲಿನ ಪೊದೆಯ ಸಮೀಪ ಎಳೆದೊಯ್ದು ಬಲತ್ಕಾರಕ್ಕೆ ಯತ್ನಿಸಿದ್ದ ಎಂದು ದೂರಲಾಗಿದೆ.
ಈ ಸಂದರ್ಭ ಮಹಿಳೆ ತೀವ್ರ ಪ್ರತಿರೋಧ ತೋರಿ ಬೊಬ್ಬೆ ಹಾಕಿದಾಗ ಸಮೀಪದ ಮನೆಯ ಮಹಿಳೆಯೊಬ್ಬರು ಓಡಿ ಬಂದರು. ಇದನ್ನು ನೋಡಿದಾಗ ಅಪರಿಚಿತ ಕತ್ತಲಲ್ಲಿ ಪರಾರಿಯಾದನು. ಮಾಹಿತಿ ತಿಳಿದು ತಕ್ಷಣ ಸ್ಥಳಕ್ಕೆ ಆಗಮಿಸಿದ ಕಾಪು ವೃತ್ತ ನಿರೀಕ್ಷಕ ಮಹೇಶ್ ಪ್ರಸಾದ್ ಹಾಗೂ ಕಾಪು ಎಸ್ಸೈ ರಾಜಶೇಖರ ಬಿ.ಸಾಗನೂರು ಪರಿಶೀಲನೆ ನಡೆಸಿದರು. ರಾತ್ರಿ ಸ್ಥಳೀಯರು ಸುತ್ತಮುತ್ತ ಆರೋಪಿಗಾಗಿ ಹುಡಾಕಟ ನಡೆಸಿದರು.
ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.