ಚಾರ್ಮಾಡಿ: ಪ್ರವಾಹಪೀಡಿತ ಪ್ರದೇಶದಲ್ಲಿ ಸಿಲುಕಿದ ನೀರಾವರಿ ಇಂಜಿನಿಯರ್ ಕಾರು
ಬೆಳ್ತಂಗಡಿ, ಅ.26: ರಾಜ್ಯ ಕಾನೂನು ಹಾಗೂ ಸಣ್ಣ ನೀರಾವರಿ ಇಲಾಖೆಯ ಸಚಿವ ಜೆ.ಸಿ.ಮಾಧುಸ್ವಾಮಿ ಶನಿವಾರ ಪ್ರವಾಹ ಪೀಡಿತ ಪ್ರದೇಶಗಳ ಭೇಟಿಗಾಗಿ ಚಾರ್ಮಾಡಿ ಗ್ರಾಮದ ಅರಣಪಾದೆ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಸಚಿವರ ಜತೆ ಆಗಮಿಸಿದ ಸರಕಾರಿ ಕಾರು ಹೂತು ಹೋದ ಘಟನೆ ನಡೆದಿದೆ.
ಸಚಿವರ ಜತೆಗಿದ್ದ ಸಣ್ಣ ನೀರಾವರಿ ಇಲಾಖೆಯ ಎಂಜಿನಿಯರ್ ಬಂದಿದ್ದ ಕಾರನ್ನು ಚಾಲಕ ತಿರುಗಿಸುವ ವೇಳೆಗೆ ಹೂತು ಹೋಯಿತು. ಕಾರನ್ನು ತಿರುಗಿಸಿ ಮುಂದೆ ತೆಗೆಯುತ್ತಿದ್ದಾಗ ಕಾರಿನ ಹಿಂದಿನ ಚಕ್ರಗಳು ಮರಳಿನಲ್ಲಿ ಹೂತು ಹೋಯಿತು. ಸ್ಥಳೀಯರು ಹಾಗೂ ಸಚಿವರೊಂದಿಗೆ ಬಂದವರು ಸೇರಿ ಕಲ್ಲುಗಳನ್ನು ಹಾಕಿ ಹೊಂಡಗಳನ್ನು ತುಂಬಿ ದೂಡಿ ಕಾರನ್ನು ಮರಳಿನಿಂದ ಹೊರತಂದರು.
ತಾಲೂಕಿನಲ್ಲಿ ನಿನ್ನೆ ರಾತ್ರಿಯಿಂದ ಭಾರೀ ಮಳೆ ಸುರಿಯುತ್ತಿದ್ದು ನದಿ ಹಳ್ಳಗಳು ತುಂಬಿ ಹರಿಯುತ್ತಿವೆ. ಧರ್ಮಸ್ಥಳ ನೇತ್ರಾವತಿ ಸ್ನಾನಘಟದಲ್ಲಿ ನೇತ್ರಾವತಿ ನದಿ ದಡಮೀರಿ ಹರಿಯುತ್ತಿವೆ.
ಕಿಂಡಿ ಅಣೆಕಟ್ಟಿನ ತಡಗೋಡೆ ಒಡೆದು ಹೋಗಿರುವ ಕಾರಣ ನದಿ ನೀರು ನೇರವಾಗಿ ಸ್ನಾನಘಟ್ಟಕ್ಕೆ ನುಗ್ಗಿದೆ. ತಾಲೂಕಿನ ವಿವಿದ ಭಾಗಗಳಲ್ಲಿ ನದಿಗಳು ಉಕ್ಕಿ ಹರಿಯುತ್ತಿವೆ. ಆದರೆ ಯಾವುದೇ ಅನಾಹುತಗಳು ಸಂಭವಿಸಿಲ್ಲ.