ಮಾಜಿ ಶಾಸಕ ಮೊಯ್ದಿನ್ ಬಾವಾ-ಮಾಜಿ ಮೇಯರ್ ಗುಲ್ಝಾರ್ ಬಾನು ಮಧ್ಯೆ ಮಾತಿನ ಚಕಮಕಿ
ಮನಪಾ ಚುನಾವಣೆ ಟಿಕೆಟ್ ಹಂಚಿಕೆ ವಿವಾದ
ಮಂಗಳೂರು, ಅ.30: ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಸ್ಪರ್ಧಿಸಲು ಟಿಕೆಟ್ ಹಂಚಿಕೆಗೆ ಸಂಬಂಧಿಸಿ ಮಾಜಿ ಶಾಸಕ ಮೊಯ್ದಿನ್ ಬಾವಾ-ಮಾಜಿ ಮೇಯರ್ ಗುಲ್ಝಾರ್ ಬಾನು ಮಧ್ಯೆ ಬುಧವಾರ ರಾತ್ರಿ ಮಾತಿನ ಚಕಮಕಿ ನಡೆದಿದೆ.
ನ.12ರಂದು ನಡೆಯುವ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿಯನ್ನು ಜಿಲ್ಲಾ ಕಾಂಗ್ರೆಸ್ ಮುಖಂಡರು ನಗರದ ಖಾಸಗಿ ಹೊಟೇಲಿನಲ್ಲಿ ಸುದ್ದಿಗೋಷ್ಠಿಯಲ್ಲಿ ಬಿಡುಗಡೆಗೊಳಿಸಿದ್ದರು. ಸುದ್ದಿಗೋಷ್ಠಿ ಮುಗಿಸಿದ ಬಳಿಕ ಮೊಯ್ದಿನ್ ಬಾವಾ ಮತ್ತು ಗುಲ್ಜಾರ್ ಬಾನು ಮಧ್ಯೆ ಟಿಕೆಟ್ ತಪ್ಪಿರುವುದರ ಬಗ್ಗೆ ಮಾತಿನ ಚಕಮಕಿ ನಡೆದಿದೆ. ಈ ಸಂದರ್ಭ ಗುಲ್ಜಾರ್ ಬಾನು ಅವರ ಪುತ್ರ ನಿಹಾಲ್ ಕೂಡಾ ಅಲ್ಲೇ ಇದ್ದು, ಆತ ಮೊಯ್ದಿನ್ ಬಾವಾರನ್ನು ತರಾಟೆಗೆ ತೆಗೆದುಕೊಂಡರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಮಾತಿನ ಚಕಮಕಿ ತೀವ್ರಗೊಳ್ಳುತ್ತಲೇ ಪರಸ್ಪರ ಹೊಯ್ಕೈ ಕೂಡಾ ನಡೆದಿದೆ ಎಂದು ಹೇಳಲಾಗುತ್ತಿದೆ. ಕೊನೆಗೆ ಪಕ್ಷದ ಹಿರಿಯ ಮುಖಂಡರು ಇತ್ತಂಡವನ್ನು ಸಮಾಧಾನ ಪಡಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ಅಸಮಾಧಾನ ಸ್ಪೋಟ: ಮನಪಾದ 60 ವಾರ್ಡ್ಗಳಲ್ಲಿ ಈ ಬಾರಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಅಧಿಕವಿತ್ತು. ಕೆಲವು ವಾರ್ಡ್ಗಳಲ್ಲಿ ಪಕ್ಷದ ಯುವ ಕಾರ್ಯಕರ್ತರಿಗೆ ಟಿಕೆಟ್ ಸಿಗದ ಅಸಮಾಧಾನವಿದ್ದು, ಅದರ ಮೊದಲ ಭಾಗವಾಗಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ಸ್ಪೋಟಗೊಂಡಿದೆ.