ಸಂಚಾರ ನಿಯಮ ಉಲ್ಲಂಘನೆ ಆರೋಪ: ವಾಹನ ಸವಾರನೊಂದಿಗೆ ಟ್ರಾಫಿಕ್ ಎಎಸ್ಸೈ ಜಟಾಪಟಿ
ವೀಡಿಯೋ ವೈರಲ್
ಬಂಟ್ವಾಳ, ಅ.31: ಟ್ರಾಫಿಕ್ ಪೊಲೀಸರೊಬ್ಬರು ಸಂಚಾರ ನಿಯಮ ಉಲ್ಲಂಘನೆ ಆರೋಪದಡಿ ವಾಹನ ಸವಾರರೊಬ್ಬರ ನಡುವಿನ ಮಾತಿನ ಚಕಮಕಿ ಹಾಗೂ ಸವಾರನನ್ನು ಎಳೆದಾಡಿದ ಘಟನೆಯ ವೀಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಪೊಲೀಸರ ಈ ನಡೆಗೆ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವೀಡಿಯೋ ತುಣುಕು ಬಂಟ್ವಾಳ ತಾಲೂಕಿನ ಮೆಲ್ಕಾರ್ ಜಂಕ್ಷನ್ ಸಮೀಪದ ಗುಡ್ಡೆಯಂಗಡಿ ರಸ್ತೆಯಲ್ಲಿ ಇಂದು ನಡೆದಿದೆ ಎನ್ನಲಾಗುತ್ತಿದ್ದು, ಹೆಚ್ಚಿನ ಮಾಹಿತಿ ತಿಳಿದುಬಂದಿಲ್ಲ.
ಮೆಲ್ಕಾರ್ ಟ್ರಾಫಿಕ್ ಠಾಣೆಯ ಎಎಸ್ಸೈ ಹಾಗೂ ಸಂಚಾರ ಉಲ್ಲಂಘನೆ ಮಾಡಿದ ಸವಾರನ ನಡುವೆ ವಾಗ್ವಾದ ಉಂಟಾಗಿದೆ ಎನ್ನಲಾಗಿದ್ದು, ಬಳಿಕ ಎಎಸ್ಸೈ ಅವರು ಸವಾರನೋರ್ವನ ಬಟ್ಟೆ ಹಿಡಿದು ಎಳೆದಾಡಿದ ಸನ್ನಿವೇಶವನ್ನು ಇನ್ನೋರ್ವ ಸವಾರ ಮೊಬೈಲ್ ಮೂಲಕ ಚಿತ್ರೀಕರಿಸಿದ್ದಾರೆ. ಪೊಲೀಸರ ಈ ದುರ್ವತನೆಗೆ ಆಕ್ರೋಶ ವ್ಯಕ್ತಪಡಿಸಿ, ವಿವಿಧ ಬರಹಗಳೊಂದಿಗೆ ವೀಡಿಯೋ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಘಟನೆಯ ವಾಸ್ತವಾಂಶ ಪರಿಶೀಲನೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆದೇಶ
ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವ್ಯಾಪ್ತಿಯ ಸಂಚಾರ ಪೊಲೀಸ್ ಠಾಣೆಯೊಂದರ ಸಹಾಯಕ ಪೊಲೀಸ್ ಉಪನಿರೀಕ್ಷಕರು ಮತ್ತು ವಾಹನ ಚಾಲಕನ ನಡುವೆ ವಾಗ್ವಾದ ನಡೆಯುವ ವೀಡಿಯೋ ಒಂದು ಸಾಮಾಜಿಕ ಜಾಲತಾಣ (ವಾಟ್ಸ್ ಆ್ಯಪ್)ದಲ್ಲಿ ಹರಿದಾಡುತ್ತಿದೆ. ಈ ಘಟನೆಯ ವಾಸ್ತವಾಂಶದ ಬಗ್ಗೆ ವರದಿ ನೀಡಲು ಸಹಾಯಕ ಪೊಲೀಸ್ ಅಧೀಕ್ಷಕರು, ಬಂಟ್ವಾಳ ಉಪವಿಭಾಗ ಇವರಿಗೆ ದ.ಕ. ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್ ಆದೇಶಿಸಿದ್ದಾರೆ. ಈ ಬಗ್ಗೆ ವರದಿ ಬಂದ ಕೂಡಲೇ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ಪ್ರಕಟನೆ ತಿಳಿಸಿದೆ.