ಪ್ರತ್ಯೇಕ ಘಟನೆ: ಇಬ್ಬರು ಮಹಿಳೆಯರು ಆತ್ಮಹತ್ಯೆ
ಮಣಿಪಾಲ, ಅ.31: ಜೀವನದಲ್ಲಿ ಜಿಗುಪ್ಸೆಗೊಂಡ ಮಹಿಳೆಯೊಬ್ಬರು ಬುಧವಾರ ಮನೆಯ ದೇವರ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ದೊಡ್ಡಣಗುಡ್ಡೆಯ ಮಲ್ಲಂಪಳ್ಳಿಯಿಂದ ವರದಿಯಾಗಿದೆ.
ಮೃತರನ್ನು ಮಾಧವ ಮೇಸ್ತ್ರಿ ಎಂಬವರ ಪತ್ನಿ ಸುಮತಿ (45) ಎಂದು ಗುರುತಿಸಲಾಗಿದೆ. ಸುಮತಿ ಅವರು ನಿನ್ನೆ ಬೆಳಗ್ಗೆ 8:00ಗಂಟೆಯಿಂದ ಸಂಜೆ 5:00 ಗಂಟೆ ನಡುವಿನ ಅವಧಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
ಮಲ್ಪೆ: ಕಳೆದ 6-7 ವರ್ಷಗಳಿಂದ ಮಾನಸಿಕ ಖಾಯಿಲೆಗಾಗಿ ಚಿಕಿತ್ಸೆ ಪಡೆಯುತಿದ್ದ ಮಹಿಳೆಯೊಬ್ಬರು ಇಂದು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಿದಿಯೂರು ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಕಿದಿಯೂರಿನ ಚಂದ್ರಶೇಖರ ಬಂಗೇರ ಇವರ ಪತ್ನಿ ಸಬಿತಾ ಪುತ್ರನ್(38) ಎಂದು ಗುರುತಿಸಲಾಗಿದೆ. ಇವರು ಮಾನಸಿಕ ಕಾಯಿಲೆಗಾಗಿ ಉಡುಪಿಯ ಎ.ವಿ.ಬಾಳಿಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದರು. ಇಂದು ಬೆಳಗ್ಗೆ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮನೆಯ ಬಾವಿಯ ರಾಟೆಯ ಹಗ್ಗವನ್ನು ಕುತ್ತಿಗೆಗೆ ಬಿಗಿದು ಬಾವಿಯೊಳಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.