ವಿಟ್ಲ: ಎನ್ ಆರ್ ಸಿ ಮಾಹಿತಿ ಕಾರ್ಯಕ್ರಮ
ವಿಟ್ಲ: ರಾಜಕೀಯ ದುರುದ್ದೇಶ ಹಾಗೂ ತಾರತಮ್ಯ ನೀತಿಯಿಂದ ಕೂಡಿದ ರಾಷ್ಟ್ರೀಯ ಅಧಿಕೃತ ಪೌರತ್ವ (ಎನ್.ಆರ್.ಸಿ) ಯನ್ನು ಎಲ್ಲರೂ ಒಟ್ಟಾಗಿ ವಿರೋಧಿಸಬೇಕಾಗಿದೆ. ಇದರ ವಿರುದ್ದ ಸಂಘಟಿತ ಹೋರಾಟ ಅಗತ್ಯ ಎಂದು ಎಸ್.ವೈ.ಎಸ್. ಕೇರಳ ರಾಜ್ಯ ಕಾರ್ಯದರ್ಶಿ ಅಬ್ದುಸ್ಸಮದ್ ಪುಕಟೂರು ಅಭಿಪ್ರಾಯಪಟ್ಟರು.
ಕಲ್ಲಡ್ಕ ಮುಹಿಯ್ಯುದ್ದೀನ್ ಜುಮಾ ಮಸೀದಿ ವತಿಯಿಂದ ಇಲ್ಲಿನ ಮುನೀರುಲ್ ಇಸ್ಲಾಂ ಮದರಸ ಹಾಲ್ ನಲ್ಲಿ ನಡೆದ ಕೇಂದ್ರ ಸರಕಾರ ದೇಶಾದ್ಯಂತ ಜಾರಿಗೊಳಿಸಲು ಉದ್ದೇಶಿಸಿರುವ ಎನ್.ಆರ್.ಸಿ. ಮಾಹಿತಿ ಕಾರ್ಯಕ್ರಮದಲ್ಲಿ ಮುಖ್ಯ ಬಾಷಣಗೈದ ಅವರು, ದೇಶದಲ್ಲಿ ಯಾವುದೇ ರೀತಿಯ ಕಾನೂನು ಜಾರಿಯಾಗುವ ಮೊದಲು ಅದರ ಸಾಧಕ - ಬಾಧಕಗಳ ಬಗ್ಗೆ ಅರಿತುಕೊಂಡು ಅದು ಸಮಾಜಕ್ಕೆ ಮಾರಕವಾಗಿದ್ದರೆ ಅಂತಹದನ್ನು ಆರಂಭದಲ್ಲೇ ವಿರೋಧಿಸಿ ಆ ಕಾನೂನು ಜಾರಿಯಾಗದಂತೆ ನೋಡಿಕೊಳ್ಳುವುದು ಪ್ರಜ್ಞಾವಂತ ನಾಗರಿಕರ ಕರ್ತವ್ಯವಾಗಿದೆ ಎಂದರು.
ಕಲ್ಲಡ್ಕ ಕೇಂದ್ರ ಮಸೀದಿ ಅದ್ಯಕ್ಷ ಅಬೂಬಕ್ಕರ್ ಹಾಜಿ ಗೋಳ್ತಮಜಲು ಅಧ್ಯಕ್ಷತೆ ವಹಿಸಿದ್ದರು. ಸ್ಥಳೀಯ ಮುದರ್ರಿಸ್ ಶೇಖ್ ಮುಹಮ್ಮದ್ ಫೈಝಿ ಇರ್ಫಾನಿ ಉದ್ಘಾಟಿಸಿದರು.
ಮಸೀದಿ ಉಪಾಧ್ಯಕ್ಷ ಮುಹಮ್ಮದ್ ಹಾಜಿ, ಕೋಶಾಧಿಕಾರಿ ಯೂಸುಫ್ ಹಾಜಿ ಅಮರ್, ಮದರಸ ಮುಖ್ಯ ಶಿಕ್ಷಕ ಬಿ.ಟಿ.ಇಕ್ಬಾಲ್ ದಾರಿಮಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಸೀದಿ ಆಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ಹಮೀದ್ ಹಾಜಿ ಗೋಲ್ಡನ್ ಸ್ವಾಗತಿಸಿ, ವಂದಿಸಿದರು.