ಮೂಡುಬಿದಿರೆ : ಮೋರಿಗೆ ಬಿದ್ದು ಯುವಕ ಸಾವು
ಮೂಡುಬಿದಿರೆ : ಇಲ್ಲಿನ ವಿದ್ಯಾಗಿರಿಯ ಗಾಂಧಿನಗರ ಬಳಿ ಕಾಮಗಾರಿ ಹಂತದಲ್ಲಿದ್ದ ಮೋರಿಗೆ ಶನಿವಾರ ತಡರಾತ್ರಿ ಬೈಕ್ ಬಿದ್ದು ಸಹಸವಾರನೋರ್ವ ಮೃತಪಟ್ಟ ಘಟನೆ ಮೂಡುಬಿದಿರೆಯಲ್ಲಿ ನಡೆದಿದೆ.
ಬಜ್ಪೆ ನಿವಾಸಿ ಪುರುಷೋತ್ತಮ ಆಚಾರ್ಯ ಅವರ ಪುತ್ರ, ಎಡಪದವಿನ ಚಿಕನ್ ಪಾಸೆಸಿಂಗ್ ಸೆಂಟರ್ನ ಕಾರ್ಮಿಕ ಪ್ರಜ್ವಲ್ ಆಚಾರ್ಯ (22) ಮೃತಪಟ್ಟ ಯುವಕ.
ಇರ್ವತ್ತೂರಿನಲ್ಲಿ ಸ್ನೇಹಿತನೊಬ್ಬನ ತಂದೆಯ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡು ಮೂಡುಬಿದಿರೆ ಕಡೆಯಿಂದ ಬಜ್ಪೆಗೆ ಬೈಕ್ ಸವಾರ ಇರ್ವತ್ತೂರಿನ ದೀಕ್ಷಾನ್ ಎಂಬಾತನೊಂದಿಗೆ ಹಿಂತಿರುಗುತ್ತಿದ್ದ ವೇಳೆ ಮೂಡುಬಿದಿರೆ - ಮಂಗಳೂರು ಹೆದ್ದಾರಿಯ ಮೂಡುಬಿದಿರೆ ಪುರಸಭೆ ವ್ಯಾಪ್ತಿಯ ಗಾಂಧಿನಗರದಲ್ಲಿ ಘಟನೆ ಸಂಭವಿಸಿದೆ.
ಹೆದ್ದಾರಿಯಲ್ಲಿ ರಸ್ತೆ ಹಾಗೂ ಮೋರಿಯ ಕಾಮಗಾರಿ ನಡೆಯುತ್ತಿದ್ದು ಇದನ್ನು ಗಮನಿಸದೆ ರಾತ್ರಿ ವೇಳೆ ಮೋರಿಗೆ ಬಿದ್ದ ಪರಿಣಾಮವಾಗಿ ಪ್ರಜ್ವಲ್ನ ಎದೆ, ಮುಖ ಹಾಗೂ ಹೊಟ್ಟೆಯ ಭಾಗಕ್ಕೆ ಗಂಭೀರ ಗಾಯವಾಗಿದೆ. ತಕ್ಷಣ ಆತನನ್ನು ಮೂಡುಬಿದಿರೆ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಮಂಗಳೂರಿನ ಖಾಸಗಿ ಆಸ್ಪತ್ರೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಪ್ರಜ್ವಲ್ ರವಿವಾರ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.