ಸುಪ್ರೀಂ ತೀರ್ಪು ಪೂರ್ಣ ತೃಪ್ತಿ ನೀಡಿಲ್ಲ: ಜಮಾಅತೆ ಇಸ್ಲಾಮಿ ಹಿಂದ್
ಹೊಸದಿಲ್ಲಿ, ನ.9: ಬಾಬರಿ ಮಸೀದಿಗೆ ಸಂಬಂಧಿಸಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಪೂರ್ಣ ತೃಪ್ತಿ ನೀಡಿಲ್ಲ ಎಂದು ಜಮಾಅತೆ ಇಸ್ಲಾಮಿ ಹಿಂದ್ ರಾಷ್ಟ್ರಾಧ್ಯಕ್ಷ ಸೈಯದ್ ಸಆದತುಲ್ಲಾ ಹುಸೇನಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬಾಬರಿ ಮಸೀದಿ ಭೂ ವ್ಯಾಜ್ಯದ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಕೆಲವು ಅಂಶಗಳು ಮುಖ್ಯದ್ದಾಗಿದೆ. ದೇಶದ ಸಂವಿಧಾನವನ್ನು ಬಲಪಡಿಸುವ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ನೆರವಾಗುವಂತದ್ದಾಗಿದೆ. ಹಾಗೆಯೇ ತೀರ್ಪಿನ ಅನೇಕ ಅಂಶಗಳನ್ನು ಒಪ್ಪಲು ಸಾಧ್ಯವಿಲ್ಲ. ಕಾನೂನು-ನಿಯಮಗಳು ಮತ್ತು ಅತ್ಯುನ್ನತ ಮಟ್ಟದಲ್ಲಿರುವ ಸುಸಂಸ್ಕೃತ ಸಮಾಜವು ಸುಪ್ರೀಂ ಕೋಟ್ ಮತ್ತು ನ್ಯಾಯಾಂಗ ಪ್ರಕ್ರಿಯೆಯು ಏನನ್ನು ತೀರ್ಮಾನಿಸುತ್ತದೋ ಅದನ್ನು ಗೌರವಿಸುತ್ತೇವೆ ಮತ್ತು ಸ್ವೀಕರಿಸುತ್ತೇವೆ. ಬಾಬರಿ ಮಸೀದಿಗೆ ಸಂಬಂಧಿಸಿ ಬಂದಿರುವ ಈ ತೀರ್ಪನ್ನು ವಕೀಲರು ಪರಿಶೀಲನೆ ನಡೆಸುತ್ತಿದ್ದು, ಮೇಲ್ಮನವಿ ಸಲ್ಲಿಸಲು ಅವಕಾಶವಿದೆಯೇ ಎಂಬುದು ಮುಂದೆ ಗೊತ್ತಾಗಲಿದೆ. ಹಾಗೆಯೇ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಇತರ ಸದಸ್ಯರೊಂದಿಗೆ ಸಮಾಲೋಚಿಸಿ ಆ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದ್ದೇವೆ. ಅಲ್ಲದೆ ಸಾರ್ವಜನಿಕರು ಈ ತೀರ್ಪನ್ನು ಮತ್ತು ಕಾನೂನನ್ನು ಗೌರವಿಸಬೇಕು ಹಾಗೂ ಕೋಮುಸೌಹಾರ್ದವನ್ನು ಕಾಪಾಡಬೇಕು ಎಂದು ಸೈಯದ್ ಸಆದತುಲ್ಲಾ ಹುಸೇನಿ ತಿಳಿಸಿದ್ದಾರೆ.