ಸ್ವಸಹಾಯ ಸಂಘಗಳು ವಿಶ್ವದಲ್ಲೇ ಪ್ರಸಿದ್ಧಿ: ಲಾಲಾಜಿ ಮೆಂಡನ್
ವಿಶೇಷ ಚೇತನರಿಗೆ ಸಲಕರಣೆ ವಿತರಣಾ
ಪಡುಬಿದ್ರಿ: ಸ್ವ-ಸಹಾಯ ಸಂಘಗಳಿಂದ ಅವಿಭಜಿತ ದಕ ಜಿಲ್ಲೆಗೆ ವಿಶ್ವದಾದ್ಯಂತ ಪ್ರಸಿದ್ಧಿ ಪಡೆದಿದೆ. ಮಹಿಳಾ ಸಬಲೀಕರಣಕ್ಕೆ ಯೋಜನೆಯ ಕೊಡುಗೆ ಅಪಾರವಾದುದು ಎಂದು ಕಾಪು ಶಾಸಕ ಲಾಲಾಜಿ ಆರ್.ಮೆಂಡನ್ ಹೇಳಿದರು.
ಹೆಜಮಾಡಿಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ರವಿವಾರ ಉಡುಪಿ ತಾಲೂಕು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ವತಿಯಿಂದ ಜನ ಮಂಗಲ ಯೋಜನೆಯಡಿ ವಿಶೇಷ ಚೇತನರಿಗೆ ಸಲಕರಣೆ ವಿತರಣಾ ಸಮಾರಂಭ ವನ್ನು ಉದ್ಘಾಟಿಸಿ ಸವಲತ್ತುಗಳನ್ನು ವಿತರಿಸಿ ಮೆಂಡನ್ ಮಾತನಾಡಿದರು.
ಫೆಬ್ರವರಿಯಲ್ಲಿ ಜಾರಿಗೆ ಬಂದ ಜನ ಮಂಗಲ ಕಾರ್ಯಕ್ರಮದಡಿ ಉಡುಪಿ ತಾಲೂಕಿನಾದ್ಯಂತ 18 ಮಂದಿಗೆ ವೀಲ್ ಚೇರ್ ಮತ್ತು ವಾಟರ್ ಬೆಡ್ ನೀಡಲು ಟ್ರಸ್ಟ್ ನಿರ್ಧರಿಸಿದ್ದು, ಹೆಜಮಾಡಿಯ ಕಾರ್ಯಕ್ರಮದಲ್ಲಿ ಪಡುಬಿದ್ರಿ ಮತ್ತು ಹೆಜಮಾಡಿಯ 6 ಫಲಾನುಭವಿಗಳಿಗೆ ವೀಲ್ಚೇರ್ ಮತ್ತು ವಾಟರ್ ಬೆಡ್ಗಳನ್ನು ವಿತರಿಸಲಾಯಿತು ಎಂದರು.
ಹೆಜಮಾಡಿ ಗ್ರಾಪಂ ಅಧ್ಯಕ್ಷೆ ವಿಶಾಲಾಕ್ಷಿ ಯು.ಪುತ್ರನ್ ಅಧ್ಯಕ್ಷತೆ ವಹಿಸಿದ್ದರು. ಹೆಜಮಾಡಿ ಶ್ರೀ ಮಹಾಲಿಂಗೇಶ್ವರ ದೇವಳದ ಆಡಳಿತ ಮೊಕ್ತೇಸರ ದಯಾನಂದ ಹೆಜ್ಮಾಡಿ, ಹೆಜಮಾಡಿ ಗ್ರಾಪಂ ಉಪಾಧ್ಯಕ್ಷ ಸುಧಾಕರ ಕರ್ಕೇರ, ಧರ್ಮಸ್ಥಳ ಯೋಜನೆಯ ಯೋಜನಾಧಿಕಾರಿ ರೋಹಿತ್ ಎಚ್., ಹೆಜಮಾಡಿ ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟಗಳ ಅಧ್ಯಕ್ಷರುಗಳಾದ ಅಶೋಕ್ ವಿಕೆ ಮತ್ತು ಸಂಧ್ಯಾ, ಸೇವಾ ಪ್ರತಿನಿಧಿಗಳಾದ ತಾರಾವತಿ ಮತ್ತು ರಾಜೇಶ್ವರೀ ಮುಖ್ಯ ಅತಿಥಿಗಳಾಗಿದ್ದರು.
ಬಿ.ಸಿ.ಟ್ರಸ್ಟ್ ಪಡುಬಿದ್ರಿ ವಲಯದ ಮೇಲ್ವಿಚಾರಕ ಕೆ.ರತ್ನಾಕರ ಕೊಟ್ಟಾರಿ ಕಾರ್ಯಕ್ರಮ ನಿರ್ವಹಿಸಿದರು. ಅಶೋಕ್ ವಿ.ಕೆ. ಸ್ವಾಗತಿಸಿದರು. ಪವಿತ್ರಾ ಗಿರೀಶ್ ವಂದಿಸಿದರು.