ಭಟ್ಕಳ: ಟಿಪ್ಪು ಸುಲ್ತಾನ್ ಸ್ಮರಣಾರ್ಥ ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ
ಭಟ್ಕಳ: ಇಲ್ಲಿನ ಮಜ್ಲಿಸೆ ಇಸ್ಲಾಹ್-ವ-ತಂಝೀಮ್ ವತಿಯಿಂದ ಸ್ವಾತಂತ್ರ್ಯ ಸೇನಾನಿ ಹಝರತ್ ಟಿಪ್ಪು ಸುಲ್ತಾನ್ ರ 269ನೇ ಜಯಂತಿ ಅಂಗವಾಗಿ ರವಿವಾರದಂದು ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆಯನ್ನು ಆಯೋಜಿಸಿತ್ತು. ತಾಲೂಕಿನ ವಿವಿಧ ಶಾಲಾ ವಿದ್ಯಾರ್ಥಿಗಳು ಭಾಷಣೆಯಲ್ಲಿ ಭಾಗವಹಿಸಿ ಟಿಪ್ಪು ಸುಲ್ತಾನನ ಆಡಳಿತ, ಆತನ ಕಾಲದ ಸ್ಥಿತಿಗತಿಗಳ ಮೇಲೆ ಬೆಳಕು ಚೆಲ್ಲಿದರು.
ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಶಿಕ್ಷಣ ತಜ್ಞ ಹಾಗೂ ಹಝರತ್ ಟಿಪ್ಪು ಸುಲ್ತಾನ್ ಗ್ರಂಥಕರ್ತ ಮೌಲಾನ ಮುಹಮ್ಮದ್ ಇಲ್ಯಾಸ್ ನದ್ವಿ ಮಾತನಾಡಿ, ಟಿಪ್ಪೂ ಸುಲ್ತಾನ್ ಭಟ್ಕಳಕ್ಕೆ ಬಹಳ ಸಮೀಪವಾಗಿದ್ದರು, ಅವರ ಅಜ್ಜಿ ಹಾಗೂ ಪತ್ನಿಯರಲ್ಲಿ ಓರ್ವ ಪತ್ನಿ ಭಟ್ಕಳದ ನವಾಯತ್ ಸಮುದಾಯದವರಾಗಿದ್ದು ಭಟ್ಕಳಕ್ಕೂ ಟಿಪ್ಪೂ ಸುಲ್ತಾನರಿಗೂ ಅವಿನಾಭಾವ ಸಂಬಂಧವಿತ್ತು ಎಂದರು. ಆಂಗ್ಲರ ವಿರುದ್ಧ ಹೋರಾಡಿ ವೀರ ಮರಣವನ್ನಪ್ಪಿದ್ದರಲ್ಲದೆ ಇಡೀ ತಮ್ಮ ಕುಟುಂಬವನ್ನೇ ದೇಶಕ್ಕಾಗಿ ಬಲಿಯರ್ಪಿಸಿದರು. ಇಂತಹ ಮಹಾನ್ ಹೋರಾಟಗಾರ ಇತಿಹಾಸದಲ್ಲಿ ಮತ್ತೆಲ್ಲೋ ಕಾಣಲು ಸಾಧ್ಯವಿಲ್ಲ ಎಂದರು.
ಭಾಷಣ ಸ್ಪರ್ಧೆಯಲ್ಲಿ ಜಾಮಿಯಾ ಇಸ್ಲಾಮಿಯಾ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ಸೈಯ್ಯದ್ ಆಹ್ಮದ್ ಅಜಾಯಿಬ್ ಪ್ರಥಮ, ನೌನಿಹಾಲ್ ಸೆಂಟ್ರಲ್ ಸ್ಕೂಲ್ ನ ಮುಹಮ್ಮದ್ ಮಾಹಿರ್ ಸುನ್ಹೇರಿ ದ್ವಿತೀಯಾ, ಇಸ್ಲಾಮಿಯಾ ಆಂಗ್ಲೋ ಉರ್ದು ಪ್ರೌಢಶಾಲೆಯ ಮಫಾಝ್ ಆಹ್ಮದ್ ಇಕ್ಕೇರಿ ತೃತೀಯಾ ಬಹುಮಾನವನ್ನು ಪಡೆದುಕೊಂಡರು.
ತಂಝಿಮ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಖೀಬ್ ಎಂ.ಜಿ ಪ್ರಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಂಝಿಮ್ ಅಧ್ಯಕ್ಷ ಎಸ್.ಎಂ.ಸೈಯ್ಯದ್ ಪರ್ವೇಝ್ ವಹಿಸಿದ್ದರು. ಅಬ್ದುಲ್ ಖಾಲಿಖ್ ದಾಮ್ದಾ ಕಾರ್ಯಕ್ರಮ ನಿರೂಪಿಸಿದರು ಮೊಹತೆಶಮ್ ಮುಹಮ್ಮದ್ ಅಝೀಮ್ ಧನ್ಯವಾದ ಅರ್ಪಿಸಿದರು. ಪಿಲ್ಲೂರ್ ಮುಹಮ್ಮದ್ ಸಾದಿಖ್, ಅಬ್ದುಲ್ ಅಝೀಮ್ ಎಸ್.ಎಂ, ಅಬ್ದುಲ್ ಅಲೀಮ್ ಶಾಹೀನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.