ಪಡುಬಿದ್ರಿಯಲ್ಲಿ ಶಾಲೆಯತ್ತ ಸಾಹಿತ್ಯ ಕಾರ್ಯಕ್ರಮ
ಪಡುಬಿದ್ರಿ: ಸಾಹಿತ್ಯ, ಸಂಗೀತ, ಕಲೆ, ಕ್ರೀಡೆ, ಪಠ್ಯ, ಪಠ್ಯೇತರ ಚಟುವಟಿಕೆಗಳ ಮೂಲಕ ನಿಮ್ಮ ಬೇಡದ ವಿಚಾರಗಳನ್ನು ಬಿಟ್ಟಾಗ ನಿಮ್ಮೊಳಗೆ ಅದ್ಬುತವಾದ ವಿಗ್ರಹ ಸಾಕ್ಷಾತ್ಕಾರವಾಗುತ್ತದೆ ಎಂದು ಹಿರಿಯ ಸಾಹಿತಿ ಬೆಳಗೋಡು ರಮೇಶ್ ಭಟ್ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಮಣೂರು ಗೀತಾನಂದ ಪೌಂಢೇಶನ್, ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸರ್ವಜನಿಕ ಶಿಕ್ಷಣ ಇಲಾಖೆ ಸಹಭಗಿತ್ವದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕಾಪು ತಾಲೂಕು ಘಟಕ ವತಿಯಿಂದ ಪಡುಬಿದ್ರಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ನಡೆದ ಶಾಲೆಯತ್ತ ಸಾಹಿತ್ಯ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಗತ್ತೇ ಇಂದು ಬದಲಾಗುತ್ತಿದೆ, ಬದುಕನ್ನು ನೊಡುವ ದೃಷ್ಠಿ ಕೂಡಾ ಬದಲಾಗಿದೆ. ಯಶಸ್ಸು ಎಂದರೆ ಅಂಕ ಅಥವಾ ದುಡ್ಡು ಸಂಪಾದಿಸುವುದಲ್ಲ. ಜೀವನದಲ್ಲಿ ಗಂಭೀರತೆಯನ್ನು ಬಿಟ್ಟು, ನಿರ್ಧಿಷ್ಟ ಗುರಿಯೊಂದಿಗೆ ಸಾಧನೆ ಮಾಡಿ ಎಂದರು.
ಬದುಕು ಸುಂದರಗೊಳಿಸುವ ಎಲ್ಲಾ ವಸ್ತುಗಳು ಸಾಹಿತ್ಯವಾಗಿದೆ. ಮನೆತನ, ಬಣ್ಣ ಯಾವುದೂ ನಮ್ಮನ್ನು ನಿರ್ಧರಿಸುವುದಿಲ್ಲ, ನಮ್ಮ ಒಳಗನ್ನು ಬದಲಾಯಿಸಿದಾಗ ದಾರಿ ಸುಗಮವಾಗುತ್ತದೆ. ಕೆಲವು ಸಲ ಪುಸ್ತಕಗಳು ಇರುವುದು ಏನು, ಅದು ನಮ್ಮ ಬದುಕಿಗೆ ಹೇಗೆ ಮಾರ್ಗದರ್ಶನ ಆಗುತ್ತದೆ ಎಂದು ಅಲೋಚನೆ ಮಾಡುವ ಶಕ್ತಿ ಕೂಡ ನಮಗಿಲ್ಲವಾಗುತ್ತದೆ.
ಕಾರ್ಯಕ್ರಮವನ್ನು ಉದ್ಘಾಟಿಸಿದ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ನೀತಾಗುರುರಾಜ್ ಮಾತನಾಡಿ, ನಾಡುನುಡಿ, ನೆಲಜಲದ ಬಗ್ಗೆ ಚಳುವಳಿ ಮಾಡಿ ಕನ್ನಡ ಭಾಷೆಯ ಉತ್ತೇಜನಕ್ಕೆ ಸಾಹಿತ್ಯ ಪರಿಷತ್ ಕೆಲಸ ಮಾಡುತ್ತಿದೆ. ಕನ್ನಡ ಭಾಷೆ ಬಗ್ಗೆ ಕೀಳರಿಮೆ ಬಿಟ್ಟು ಅದನ್ನು ಪೋಷಿಸುವ ಕೆಲಸ ಪ್ರತಿಯೊಬ್ಬರಿಂದಾಗಬೇಕು ಎಂದರು.
ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಾಪು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಸದಸ್ಯ ಶಶಿಕಾಂತ ಪಡುಬಿದ್ರಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ದಮಯಂತಿ ಅಮೀನ್, ಪಡುಬಿದ್ರಿ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಭಾರ ಪ್ರಾಂಶುಪಾಲೆ ಯಶೋಧಾ ಉಪಸ್ಥಿತರಿದ್ದರು.
ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸದಸ್ಯ ಹರೀಶ್ ಕಟಪಾಡಿ ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿದರು. ಪ್ರಜ್ಞಾ ಮಾಪ್ಳಳ್ಳಿ ಕನ್ನಡ ಹಾಡು ಹಾಡಿದರು. ಕಾರ್ಯಕ್ರಮ ಸಂಯೋಜಕ ಇನ್ನಾ ಉದಯಕುಮಾರ್ ಶೆಟ್ಟಿ ಸ್ವಾಗತಿಸಿದರು. ವಿದ್ಯಾರ್ಥಿನಿ ಶಾಹಿದಾ ಕಾರ್ಯಕ್ರಮ ನಿರೂಪಿಸಿದರು. ತಾಲೂಕು ಗೌರವ ಕಾರ್ಯದರ್ಶಿ ವಿದ್ಯಾ ಅಮ್ಮಣ್ಣಾಯ ವಂದಿಸಿದರು.