ಅಂತರ ಪ.ಪೂ.ಕಾಲೇಜು ರಸಪ್ರಶ್ನೆ ‘ಪ್ರತ್ಯುತ್ತರ’ ಸಮಾರೋಪ
ಉಳ್ಳಾಲ: ಭಾರತದ ಸಂಸ್ಕೃತಿ_ಸಂಸ್ಕಾರದ ಅಧ್ಯಯನ ಅತೀ ಶ್ರೀಮಂತ ಹಾಗೂ ಪ್ರಾಚೀನವಾದುದು. ಇಲ್ಲಿ ಕೆಲವನ್ನು ಓದಿನಿಂದ ಸ್ವೀಕರಿಸಿದರೆ, ಇನ್ನೂ ಕೆಲವನ್ನು ಬಲ್ಲವರಿಂದ ಕೇಳಿ ತಿಳಿದು ಕೊಳ್ಳಬೇಕಾಗುತ್ತದೆ ಎಂದು ಶಾರದಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ, ಶಿಕ್ಷಣ ತಜ್ಞ ಪ್ರೊ. ಎಂ.ಬಿ. ಪುರಾಣಿಕ್ ಅಭಿಪ್ರಾಯಪಟ್ಟರು.
ಅವರು ತಲಪಾಡಿಯ ಶಾರದಾ ಪ್ರಥಮ ದರ್ಜೆ ಕಾಲೇಜು ಏರ್ಪಡಿಸಿದ ದ.ಕ ಜಿಲ್ಲಾ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ರಸಪ್ರಶ್ನೆ-‘ಪ್ರತ್ಯುತ್ತರ’ದ ಸಮಾಪನಾ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅತಿಥಿಯಾಗಿ ಆಗಮಿಸಿದ ಸರೋಜಿನೀ ಮಧುಸೂದನ ಹಾಗೂ ಕುಶೆ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸೋಂದಾ ಲಕ್ಷ್ಮೀಶ ಹೆಗಡೆಯವರು ಶಾರದಾ ಪದವಿ ವಿದ್ಯಾರ್ಥಿಗಳ ದಕ್ಷತೆ-ಬದ್ಧತೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ವಾಣಿವಿಜಯ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಚಂದ್ರಕುಮಾರ್ ಮಾತನಾಡಿದರು.
ಅಂತರ್ ಕಾಲೇಜು ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಸುಮಾರು ಹದಿನೆಂಟು ಕಾಲೇಜುಗಳ ಪೈಕಿ ಶಾರದಾ ವಿದ್ಯಾನಿಕೇತನ ಪದವಿ ಪೂರ್ವ ಕಾಲೇಜಿನ ‘ನಾದಲೀಲೆ’ ತಂಡ ಪ್ರಥಮ, ಸಂತ ಸಬಾಸ್ಟಿಯನ್ ಪದವಿ ಪೂರ್ವ ಕಾಲೇಜಿನ ‘ಪಕ್ಷಿಕಾಶಿ’ ತಂಡ ದ್ವಿತೀಯ, ಹಾಗೂ ಶಾರದಾ ಪದವಿ ಪೂರ್ವ ಕಾಲೇಜಿನ ‘ಮೇಘದೂತ’ ತಂಡ ತೃತೀಯ ಬಹುಮಾನವನ್ನು ತಮ್ಮದಾಗಿಸಿಕೊಂಡಿತು.
ಕಾರ್ಯಕ್ರಮದಲ್ಲಿ ಶಾರದಾ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಕಬ್ಬಿನಾಲೆ ಬಾಲಕೃಷ್ಣ ಭಾರದ್ವಾಜ್, ಉಪಪ್ರಾಂಶುಪಾಲ ಪ್ರೊ. ಮಾಧವ ಕೆ., ಕಾರ್ಯಕ್ರಮ ಸಂಯೋಜಕರಾದ ಭವ್ಯಲತಾ, ದೀಕ್ಷಿತಾ ಆರ್, ನೋಯಲ್ ಜೀವನ್ ನಝರತ್, ಕೇಶವ, ವರ್ಷಾ ವಿ. ಉಪಸ್ಥಿತರಿದ್ದರು.