ವಿಶ್ವ ಮಧುಮೇಹ ದಿನಾಚರಣೆ: ಜನಜಾಗೃತಿ ಜಾಥಾ
ಉಡುಪಿ, ನ.15: ಭಾರತೀಯ ವೈದ್ಯಕೀಯ ಸಂಘ(ಐಎಂಎ) ಉಡುಪಿ ಕರಾವಳಿ ಶಾಖೆ ಮತ್ತು ಲಯನ್ಸ್ ಜಿಲ್ಲೆ 317 ಸಿ ಇದರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಮಧುಮೇಹ ದಿನಾಚರಣೆಯ ಪ್ರಯುಕ್ತ ನಮ್ಮ ನಡೆ ಆರೋಗ್ಯದ ಕಡೆಗೆ ಧ್ಯೇಯವಾಕ್ಯದೊಂದಿಗೆ ಜನಜಾಗೃತಿ ಜಾಥಾವನ್ನು ಗುರುವಾರ ಉಡುಪಿ ನಗರದಲ್ಲಿ ಆಯೋಜಿಸಲಾಗಿತ್ತು.
ಉಡುಪಿ ಸರ್ವಿಸ್ ಬಸ್ ನಿಲ್ದಾಣದಿಂದ ಬ್ರಹ್ಮಗಿರಿ ನಾಯರ್ಕೆರೆಯಲ್ಲಿ ರುವ ಐಎಂಎ ಕಾರ್ಯಾಲಯದವರೆಗೆ ಏರ್ಪಡಿಸಲಾದ ಜಾಥಾದಲ್ಲಿ 500ಕ್ಕೂ ಅಧಿಕ ವೈದ್ಯರು, ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು, ಪ್ರತಿನಿಧಿಗಳು, ಭಾಗವಹಿಸಿದ್ದರು. ಜಾಥಾದ ನೇತೃತ್ವವನ್ನು ಐಎಂಎ ಉಡುಪಿ-ಕರಾವಳಿ ಅಧ್ಯಕ್ಷ ಡಾ.ಉಮೇಶ ಪ್ರಭು, ಲಯನ್ಸ್ ಜಿಲ್ಲಾ ಗವರ್ನರ್ ವಿ.ಜಿ.ಶೆಟ್ಟಿ, ಲಯನ್ಸ್ ಜಿಲ್ಲಾ ಮಧುಮೇಹ ಜಾಗೃತಿ ಸಮಿತಿಯ ಅಧ್ಯಕ್ಷ ಡಾ.ಅಶೋಕ್ ಕುಮಾರ್ ಓಕುಡೆ ವಹಿಸಿದ್ದರು.
ನಂತರ ಐಎಂಎ ಭವನದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಮಣಿಪಾಲದ ವೈದ್ಯಕೀಯ ತಜ್ಞೆ ಡಾ.ಸುಧಾ ವಿದ್ಯಾಸಾಗರ್ ಮಧುಮೇಹದಿಂದ ಆಗುವ ಅನಾಹುತಗಳು, ನಿಯಂತ್ರಣ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಉಡುಪಿ ಕರಾವಳಿ ಐಎಂಎ ಘಟಕದ ಕಾರ್ಯದರ್ಶಿ ಡಾ.ಪ್ರಕಾಶ್ ಭಟ್ ಶಿರ್ವ ವಂದಿಸಿದರು.