ಮನೆ ಕಳವಿಗೆ ಯತ್ನ: ಇಬ್ಬರ ಬಂಧನ, ನಾಲ್ವರು ಪರಾರಿ
ಶಿರ್ವ, ನ.15: ಮನೆಯ ಬೀಗ ಹಾಗೂ ಗಾಜು ಒಡೆದು ಕಳವಿಗೆ ಯತ್ನಿಸುತ್ತಿದ್ದ ಆರು ಮಂದಿಯ ಪೈಕಿ ಇಬ್ಬರನ್ನು ಸಾರ್ವಜನಿಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ನ.14ರಂದು ಸಂಜೆ 7.30ರ ಸುಮಾರಿಗೆ ಕುರ್ಕಾಲು ಗ್ರಾಮದ ನಾಡಗೋಳಿ ಎಂಬಲ್ಲಿ ನಡೆದಿದೆ.
ಕೊಪ್ಪಳದ ಕುಷ್ಟಗಿ ತಾಲೂಕಿನ ಹೊನ್ನಹಟ್ಟಿ ನಿವಾಸಿ ಮಂಜುನಾಥ(27) ಹಾಗೂ ದಾವಣಗೆರೆ ರಾಮನಗರ ನಿವಾಸಿ ನಾಗರಾಜ(25) ಬಂಧಿತ ಆರೋಪಿಗಳು. ಉಳಿದ ಆರೋಪಿಗಳಾದ ಮುಹಮ್ಮದ್ ಅಜರುದ್ದೀನ್, ಶಾಹೀಮ್ ಸಿದ್ದಿಕ್, ನಿಂಗಪ್ಪ, ಶ್ರೀನಿವಾಸ ಎಂಬವರು ಪರಾರಿಯಾಗಿದ್ದಾರೆ.
ಕೆಎ-19-ಎಂಜಿ-5622ನೆ ನಂಬರಿನ ಬಲೇನೋ ಕಾರಿನಲ್ಲಿ ಬಂದ ದುಷ್ಕರ್ಮಿಗಳು, ಮುಂಬೈಯಲ್ಲಿರುವ ನಾಡಗೋಳಿಯ ಮಹಾಬಲ ಶೆಟ್ಟಿ ಎಂಬವರ ಮನೆಗೆ ಹಾಕಿದ ಬೀಗವನ್ನು ಒಡೆದು, ಹಿಂಭಾಗದ ಬಾಗಿಲನ್ನು ಮುರಿದು, ಕಿಟಿಕಿಯ ಗಾಜನ್ನು ಪುಡಿಗೈದು ಕಳವು ಮಾಡಲು ಪ್ರಯತ್ನಸುತಿದ್ದರು.
ಗಾಜು ಒಡೆಯುವ ಶಬ್ದ ಕೇಳಿದ ಸ್ಥಳೀಯರಾದ ಪ್ರಶಾಂತ ಪೂಜಾರಿ ಹಾಗೂ ನೆರೆಕರೆಯವರು ಇವರನ್ನು ಸುತ್ತುವರಿದು ಇಬ್ಬರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ವೇಳೆ ಉಳಿದ ನಾಲ್ವರು ಓಡಿ ಪರಾರಿಯಾಗಿದ್ದಾರೆ. ಕೃತ್ಯಕ್ಕೆ ಬಳಸಿದ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.