ಮಂಗಳೂರು: ಯುವ ಜೋಡಿಗೆ ಥಳಿಸಿದ ಪ್ರಕರಣ; ಮೂವರ ಬಂಧನ
ಮಂಗಳೂರು, ನ.16: ಮುಕ್ಕ ಬೀಚ್ನಲ್ಲಿದ್ದ ಜೋಡಿಯೊಂದನ್ನು ನ.12ರಂದು ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಸ್ಥಳೀಯ ನಿವಾಸಿಗಳಾದ ವಸಂತ ಅಮೀನ್, ಸುನೀಲ್, ಶುಕೇತ್ ಪುತ್ರನ್ ಬಂಧಿತ ಆರೋಪಿಗಳು.
ಖಾಸಗಿ ಕಾಲೇಜೊಂದರ ವಿದ್ಯಾರ್ಥಿಯಾಗಿರುವ ಅಬ್ದುಲ್ ರಹ್ಮಾನ್ ಬಸರತ್ ಮತ್ತು ಈತನ ಸ್ನೇಹಿತೆ ಮುಕ್ಕ ಬೀಚ್ನಲ್ಲಿದ್ದಾಗ ಕೆಲ ಯುವಕರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿ, ಪರ್ಸ್, ಮೊಬೈಲ್ ಕಿತ್ತುಕೊಂಡು ರಾತ್ರಿ ಹತ್ತು ಗಂಟೆಯವರೆಗೆ ಕೂಡಿ ಹಾಕಿದ್ದರು. ಬಳಿಕ ಕಾಲೇಜಿನ ಡೀನ್ ಅವರನ್ನು ಕರೆದು ಎಚ್ಚರಿಕೆ ನೀಡಿ ಕಳಿಸಿದ್ದರು. ಬಳಿಕ ಹಲ್ಲೆಯಿಂದ ಆಘಾತಕ್ಕೊಳಗಾಗಿದ್ದ ಬಸರತ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದು, ನ.13ರಂದು ದೂರು ದಾಖಲಿಸಿಕೊಂಡ ಪೊಲೀಸರು ಬಳಿಕ ಆರೋಪಿಗಳ ಪತ್ತೆಗೆ ಹುಡುಕಾಟ ನಡೆಸಿ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಉಳಿದ ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story