ಪುದು ಗ್ರಾಪಂ ವ್ಯಾಪ್ತಿಯಲ್ಲಿ ಸ್ವಚ್ಛತಾ ಆಂದೋಲನಕ್ಕೆ ಚಾಲನೆ
ಬಂಟ್ವಾಳ, ನ.17: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆ, ದ.ಕ.ಜಿಲ್ಲಾ ಪಂಚಾಯತ್, ಸ್ವಚ್ಛ ಭಾರತ್ ಮಿಷನ್, ಬಂಟ್ವಾಳ ತಾಪಂ ಹಾಗೂ ಪುದು ಗ್ರಾಪಂ ಸಹಯೋಗದಲ್ಲಿ ಸ್ವಚ್ಛ ಮೇವ ಜಯತೇ ಆಂದೋಲನ ಕಾರ್ಯಕ್ರಮ ರವಿವಾರ ನಡೆಯಿತು.
ಆಂದೋಲನಕ್ಕೆ ಫರಂಗಿಪೇಟೆಯ ಜಂಕ್ಷನ್ ಬಳಿ ಪುದು ಗ್ರಾಪಂ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಸ್ವಚ್ಛತೆ ಕೇವಲ ಗ್ರಾಪಂನ ಕೆಲಸವಲ್ಲ. ಅದರಲ್ಲಿ, ಸಾರ್ವಜನಿಕರ ಸಹಭಾಗಿತ್ವವೂ ಅಗತ್ಯ. ಸ್ವಚ್ಛತಾ ಕಾರ್ಯಕ್ಕೆ ಪ್ರತಿಯೊಬ್ಬರು ಕೈಜೋಡಿಸಿದಾಗ ಮಾತ್ರ ಸುಂದರ ಸಮಾಜ ಸಾಧ್ಯ ಎಂದು ಹೇಳಿದು. ಪುದು ಗ್ರಾಪಂ ವ್ಯಾಪ್ತಿಯಲ್ಲಿ ಸ್ವಚ್ಛತೆಗೆ ಹೆಚ್ಚಿನ ಆಧ್ಯತೆ ನೀಡಲಾಗಿದೆ. ಈ ನಿಟ್ಟಿನಲ್ಲಿ ವಾರಕ್ಕೆ 2 ಸಲ ಹಾಗೂ ಫರಂಗಿಪೇಟೆ ವ್ಯಾಪ್ತಿಯಲ್ಲಿ ದಿನಾಲೂ ತ್ಯಾಜ್ಯ ವಿಲೇವಾರಿ ಮಾಡುವ ಮೂಲಕ ಸ್ವಚ್ಛತಾ ಕೆಲಸಗಳು ನಡೆಯುತಿವೆ ಎಂದು ಹೇಳಿದರು.
ಮಾಜಿ ಜಿಪಂ ಸದಸ್ಯ ಉಮರ್ ಫಾರೂಕ್ ಮಾತನಾಡಿ, ಸ್ವಚ್ಛತಾ ಕಾರ್ಯಕ್ರಮ ಒಂದು ಸೀಮಿತವಾಗಿರದೇ ನಿರಂತರ ಅಭಿಯಾನವಾದಾಗ ಸ್ವಚ್ಛ ನಗರವಾಗಲು ಸಾಧ್ಯ ಎಂದ ಅವರು, ಮನೆಯವರೇ ಹಸಿ, ಒಣ ಕಸವನ್ನು ಬೇರ್ಪಡಿಸಿ ನೀಡಿದಾಗ ತ್ಯಾಜ್ಯ ವಿಲೇವಾರಿಗೆ ಇನ್ನಷ್ಟು ಸಹಕಾರಿಯಾಗಲಿದೆ ಎಂದರು.
ಕೆನರಾ ಕಾಲೇಜಿನ ಸುಮಾರು 20ಕ್ಕು ಹೆಚ್ಚಿನ ವಿದ್ಯಾರ್ಥಿಗಳು ಫರಂಗಿಪೇಟೆ ಬಸ್ನಿಲದಾಣ, ಪುದು ಗ್ರಾಪಂ ಕಚೇರಿ ಬಳಿ ಸ್ವಚ್ಛತಾ ಕಾರ್ಯಕೈಗೊಂಡರು. ಈ ಸಂದರ್ಭದಲ್ಲಿ ಮಾಜಿ ಜಿಪಂ ಉಮರ್ ಫಾರೂಕ್, ಉಪಾಧ್ಯಕ್ಷೆ ಲೀಡಿಯೊ ಪಿಂಟೊ, ಸದಸ್ಯರಾದ ಇಕ್ಬಾಲ್ ಸುಜೀರ್, ಸಲಾಂ, ಮುಹಮ್ಮದ್ ಕೈಸು ಹಾಜರಿದ್ದರು.