ಸಂವಿಧಾನ ಒಪ್ಪದವರು ದೇಶ ಬಿಟ್ಟು ತೊಲಗಲಿ: ಶ್ಯಾಮ್ರಾಜ್ ಬಿರ್ತಿ
ಕಾರ್ಕಳ ನ.17: ದೇಶಾದ್ಯಂತ ಅಂಬೇಡ್ಕರ್ ಅವರನ್ನು ಅವಮಾನಿಸುವ ಮತ್ತು ಅವರ ಮಹತ್ವ ವನ್ನು ಕಡೆಗಣಿಸುವ ಕೆಲಸ ನಡೆಯುತ್ತಿದೆ. ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ. ಇಲ್ಲಿ ಎಲ್ಲರಿಗೂ ಸಂವಿಧಾನವೇ ಧರ್ಮ ಗ್ರಂಥ. ಈ ಸಂವಿಧಾನವನ್ನು ಒಪ್ಪದವರು ದೇಶವನ್ನು ಬಿಟ್ಟು ತೊಲಗಬೇಕು ಎಂದು ಉಡುಪಿ ಜಿಲ್ಲಾ ದಸಂಸ ಮುಖಂಡ ಶ್ಯಾಮರಾಜ್ ಬಿರ್ತಿ ಹೇಳಿದ್ದಾರೆ.
ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ಕಾರ್ಕಳ ತಾಲೂಕು ಸಮಿತಿಯ ವತಿಯಿಂದ ಅಂಬೇಡ್ಕರ್ಗೆ ಅವಮಾನ ಮಾಡಿರುವ ರಾಜ್ಯ ಸರಕಾರ ಶಿಕ್ಷಣ ಇಲಾಖೆ ವಿರುದ್ಧ ರವಿವಾರ ಕಾರ್ಕಳದಲ್ಲಿ ಹಮ್ಮಿಕೊಳ್ಳ ಲಾದ ಧರಣಿಯನ್ನು್ದೇಶಿಸಿ ಅವರು ಮಾತನಾಡುತಿದ್ದರು.
ಸಂವಿಧಾನ ದಿನದ ನಿಮಿತ್ತ ಶಿಕ್ಷಣ ಇಲಾಖೆ ಅಂಬೇಡ್ಕರ್ಗೆ ಅವಮಾನ ಮಾಡುವ ರೀತಿಯಲ್ಲಿ ಹೊರಡಿಸಿರುವ ಸುತ್ತೋಲೆಯನ್ನು ಕೂಡಲೇ ವಾಪಾಸು ಪಡೆಯಬೇಕು. ಈ ಸುತ್ತೋಲೆಗೆ ಕಾರಣೀಕರ್ತರಾದ ರಾಜ್ಯ ಮುಖ್ಯ ಕಾರ್ಯ ದರ್ಶಿ ಉಮಾಶಂಕರ್ ಅವರನ್ನು ಈ ಕೂಡಲೇ ಸೇವೆಯಿಂದ ವಜಾಗೊಳಿಸ ಬೇಕೆಂದು ಅವರು ಒತ್ತಾಯಿಸಿದರು.
ಈ ಮನುವಾದಿ ಹಾಗೂ ಕೋಮುವಾದಿ ಶಕ್ತಿಗಳನ್ನು ನಾವೆಲ್ಲ ಒಗ್ಗಟ್ಟಾಗಿ ಸೋಲಿಸಬೇಕಾಗಿದೆ. ಕೋಮುವಾದಿ ಶಕ್ತಿಗಳು ಸಂವಿಧಾನದ ತಂಟೆಗೇ ಬಂದರೆ ಕ್ರಾಂತಿಕಾರಿ ಹೋರಾಟ ಮಾಡಿ ಸಂವಿಧಾನವನ್ನು ಕಾಪಾಡಿಕೊಳ್ಳುವ ಕೆಲಸ ಮಾಡಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ದಸಂಸ ಜಿಲ್ಲಾ ಸಂಚಾಲಕ ಸುಂದರ ಮಾಸ್ತರ್ ಅಂಬೇಡ್ಕರ್ ಮೂರ್ತಿಗೆ ಮಾಲೆ ಹಾಕುವ ಮೂಲಕ ಧರಣಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕಾರ್ಕಳ ತಾಲೂಕು ಸಂಚಾಲಕ ರಾಘವ ಕುಕುಜೆ, ಹೂವಪ್ಪಮಾಸ್ತರ್, ಪರಮೇಶ್ವರ ಉಪ್ಪೂರು, ಶ್ಯಾಮಸುಂದರ್ ತೆಕ್ಕಟ್ಟೆ, ಅಣ್ಣಪ್ಪ ನಕ್ರೆ, ಭಾಸ್ಕರ್ ಮಾಸ್ಟರ್, ಗೋಪಿ ಎಳ್ಳಾರೆ ಮೊದಲಾದವರು ಉಪಸ್ಥಿತರಿದ್ದರು.