ಪಡುಬಿದ್ರಿ: ಕಂಚಿನಡ್ಕದಲ್ಲಿ ಮಕ್ಕಳ ಹಬ್ಬ ಉದ್ಘಾಟನೆ
ಪಡುಬಿದ್ರಿ: ಮಕ್ಕಳ ಹಬ್ಬ ಕಾರ್ಯಕ್ರಮವು ರಾಷ್ಟ್ರೀಯ ಭಾವೈಕ್ಯತೆಯನ್ನು ಪ್ರತಿಬಿಂಬಿಸುತ್ತದೆ. ಇಂತಹಾ ಕಾರ್ಯಕ್ರಮಗಳ ಮೂಲಕ ಪ್ರತಿಭೆಗಳಿಗೆ ಉತ್ತಮ ವೇದಿಕೆ ಕಲ್ಪಿಸುತ್ತದೆ ಎಂದು ಕಂಚಿನಡ್ಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ನಾಯಕಿ ಸಾದಿಯಾ ಬಾನು ಹೇಳಿದರು.
ಅವರು ರವಿವಾರ ಕಂಚಿನಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯುವವಾಹಿನಿ ಪಡುಬಿದ್ರಿ ಘಟಕದ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ 11ನೇ ವರ್ಷದ ಮಕ್ಕಳ ಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಉಡುಪಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ನೀತಾ ಗುರುರಾಜ್ ಮಾತನಾಡಿ, ವಿದ್ಯಾರ್ಥಿಗಳ ಪ್ರತಿಭೆಯನ್ನು ಹೊರಸೂಸುವ ಪ್ರಯತ್ನವಾಗಿ ಯುವವಾಹಿನಿ ಶ್ರಮ ಅರ್ಥಪೂರ್ಣವಾದುದು. ಮಕ್ಕಳು ಈ ಅವಕಾಶವನ್ನು ಸದುಪಯೋಗಿಸಿಕೊಳ್ಳಿರಿ ಎಂದರು.
ಯುವವಾಹಿನಿ ಪಡುಬಿದ್ರಿ ಘಟಕಾಧ್ಯಕ್ಷ ಯೋಗೀಶ್ ಪೂಜಾರಿ ಪಾದೆಬೆಟ್ಟು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಯುವವಾಹಿನಿ ಕೇಂದ್ರಸಮಿತಿಯ ಉಪಾಧ್ಯಕ್ಷ ಉದಯ ಅಮೀನ್ಮಟ್ಟು ಹಾಗೂ ಪಡುಬಿದ್ರಿ ಗ್ರಾಮ ಪಂಚಾಯಿತಿ ಸದಸ್ಯ ಹಸನ್ ಬಾವ, ಶಾಲಾ ಮುಖ್ಯ ಶಿಕ್ಷಕಿ ರೇಖಾ ಶೆಣೈ, ಯುಪಿಸಿಎಲ್ ಎಕೌಂಟ್ಸ್ ಪ್ರಬಂಧಕ ಪ್ರೇಮ್ಕುಮಾರ್ ಮತ್ತು ವಿಜಿತ್ ಕುಮಾರ್ ಉಪಸ್ಥಿತರಿದ್ದರು.
ಯುವವಾಹಿನಯ ಮಾಜಿ ಅಧ್ಯಕ್ಷ ಪ್ರಸಾದ್ ವೈ. ಕೋಟ್ಯಾನ್ ಪ್ರಸ್ತಾವಿಸಿದರು. ತೃಪ್ತಿ ಕೋಟ್ಯಾನ್ ಮತ್ತು ಸುರೇಶ್ ಪಾದೆಬೆಟ್ಟು ಕಾರ್ಯಕ್ರಮ ನಿರ್ವಹಿಸಿದರು. ಉದ್ಘಾಟನೆಯ ಬಳಿಕ ಶಾಲಾ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು.