ತೋಡಾರು ಯೆನೆಪೋಯ ಕಾಲೇಜಿನಲ್ಲಿ "ಕನ್ನಡ ಸಂಗಮ"
ಮೂಡುಬಿದಿರೆ : ತೋಡಾರಿನ ಯೆನೆಪೋಯ ತಾಂತ್ರಿಕ ಮಹಾ ವಿದ್ಯಾಲಯದ ವತಿಯಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ಏರ್ಪಡಿಸಿದ ಮಾಹಿತಿ ವಿಜ್ಞಾನ, "ಕನ್ನಡ ಸಂಗಮ-2019" ಮತ್ತು ಏಕತೆ ದಿನ ಕಾರ್ಯಕ್ರಮವು ಕಾಲೇಜಿನ ವಿಚಾರಗೋಷ್ಠಿ ಸಭಾಂಗಣದಲ್ಲಿ ಶನಿವಾರ ನಡೆಯಿತು.
ಜೈನ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಮುನಿರಾಜ ರೆಂಜಾಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಕನ್ನಡ ನಮ್ಮ ಮಾತೃ ಭಾಷೆ. ನಮ್ಮ ಅಂತರಂಗದಲ್ಲಿರುವ ತುಡಿತದ ಭಾಷೆ ಮತ್ತು ಸಂಸ್ಕøತಿಯನ್ನು ನಾವು ಮರೆಯಬಾರದು. ನವೆಂಬರ್ ತಿಂಗಳಿನಲ್ಲಿ ಮಾತ್ರ ನಾವು ಕನ್ನಡಕ್ಕೆ ಗೌರವ ಕೊಡುವುದಲ್ಲ ಬದಲಾಗಿ ಪ್ರತಿ ದಿನದಲ್ಲೂ ಕನ್ನಡಕ್ಕೆ ಆದ್ಯತೆಯನ್ನು ನೀಡಬೇಕು ಎಂದರು.
ಟಿಪ್ಪುವಿನ ಅಂತ್ಯದ ನಂತರ ಬ್ರಿಟಿಷರ ಆಳ್ವಿಕೆಯಲ್ಲಿ ಕನ್ನಡ ಭಾಷೆಯು ಛಿದ್ರವಾಗಲು ಕಾರಣವಾಯಿತು ಎಂದು ಹೇಳಿದ ಅವರು ಕನ್ನಡ ಭಾಷೆ ಹೇಗೆ ವಿಕಾಸ ಗೊಂಡಿದೆ ಮತ್ತು ಕನ್ನಡಿಗರನ್ನು ಹೇಗೆ ಒಂದುಗೂಡಿಸಿದೆ ಎಂಬುದರ ಬಗ್ಗೆ ವಿವರಿಸಿದರು.
ಕಾಲೇಜಿನ ಪ್ರಾಂಶುಪಾಲ ಡಾ/ಆರ್.ಜಿ.ಡಿ"ಸೋಜಾ ಅಧ್ಯಕ್ಷತೆಯನ್ನು ವಹಿಸಿದ್ದರು. ಸಹಾಯಕ ಪ್ರಾಧ್ಯಾಪಕ ಸಂಜೀವ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಶಮಾ ಶೆಟ್ಟಿ ಸ್ವಾಗತಿಸಿದರು. ಎನ್ಎಸ್ಎಸ್ ಅಧಿಕಾರಿ ಶ್ರೀನಿವಾಸ್ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಕೀರ್ತಿ ಶೆಟ್ಟಿ ವಿವಿಧ ಸ್ಪರ್ಧೆಗಳ ವಿಜೇತರ ಪಟ್ಟಿ ನೀಡಿದರು. ಸುಶ್ಮಿತಾ ವಿ. ಕನ್ನಡ ರಾಜ್ಯೋತ್ಸವದ ಬಗ್ಗೆ ಮಾತನಾಡಿದರು. ಪ್ರಿಯಾ ಮುಖ್ಯ ಅತಿಥಿಯನ್ನು ಪರಿಚಯಿಸಿದರು.