ನ.29ರಿಂದ ‘ಮಂಗಳೂರು ಲಿಟ್ ಫೆಸ್ಟ್’
ಮಂಗಳೂರು, ನ.1: ನಗರದ ಟಿಎಂಎ ಪೈ ಕನ್ವೆನ್ಶನಲ್ ಸಭಾಂಗಣದಲ್ಲಿ ಇದೇ ನ.29 ಮತ್ತು 30ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ‘ಮಂಗಳೂರು ಲಿಟ್ ಫೆಸ್ಟ್’ (ಮಂಗಳೂರು ಸಾಹಿತ್ಯೋತ್ಸವ) ಕಾರ್ಯಕ್ರಮ ನಡೆಯಲಿದೆ.
‘ಭಾರತದ ಪರಿಕಲ್ಪನೆಯಡಿ’ ಎಂಬ ವಿಷಯದಲ್ಲಿ ಸಮಾರಂಭ ನಡೆಯಲಿದೆ. ಸಾಹಿತಿ ಡಾ.ಚಂದ್ರಶೇಖರ ಕಂಬಾರ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿಟ್ಟೆ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಎನ್.ವಿನಯ ಹೆಗ್ಡೆ ವಹಿಸಲಿದ್ದಾರೆ.
ಈ ಬಾರಿ ಜೀವಮಾನದ ಸಾಧನೆಗಾಗಿ ಸಾಹಿತಿ, ವಿದ್ವಾಂಸ ಡಾ.ಎಂ.ಚಿದಾನಂದ ಮೂರ್ತಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಡಾ.ಎಂ.ಚಿದಾನಂದ ಮೂರ್ತಿಯವರ ಸಾಧನೆಯ ಬಗ್ಗೆ ಕರ್ನಾಟಕ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ವಿ. ವಸಂತಕುಮಾರ್ ತಿಳಿಸಿಕೊಡಲಿದ್ದಾರೆ. ಸಂಜೆ ಆಳ್ವಾಸ್ ಸಂಸ್ಥೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
‘ಮಂಗಳೂರು ಸಾಹಿತ್ಯೋತ್ಸವ-2018ರಲ್ಲಿ ಭಾಗವಹಿಸಿದ ಪ್ರಮುಖರು ನಿಜವಾದ ಭಾರತೀಯ ಪರಿಕಲ್ಪನೆಯನ್ನು ನೆನಪಿಸಲು ಇಂತಹ ಕಾರ್ಯಕ್ರಮಗಳು ಇನ್ನಷ್ಟು ನಡೆಯುತ್ತಿರಬೇಕೆಂದು ಸಲಹೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷ ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ಸಂಘಟಿಸಲಾಗಿದೆ’ ಎಂದು ಕಾರ್ಯಕ್ರಮ ಸಂಘಟಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.