ಪುತ್ತೂರು : ಮಾರಕಾಸ್ತ್ರದಿಂದ ಹಲ್ಲೆ; ಬಾಲಕಿ ಸೇರಿ ಇಬ್ಬರು ಮೃತ್ಯು, ಮಹಿಳೆ ಗಂಭೀರ
ಪುತ್ತೂರು: ಅಪರಿಚಿತ ವ್ಯಕ್ತಿಗಳು ಮಾರಾಸ್ತ್ರದಿಂದ ಹಲ್ಲೆ ನಡೆಸಿ ಒಂದೇ ಕುಟುಂಬದ ಇಬ್ಬರು ಮೃತಪಟ್ಟು ಓರ್ವ ಮಹಿಳೆ ಗಂಭೀರ ಗಾಯಗೊಂಡ ಘಟನೆ ಪುತ್ತೂರು ತಾಲೂಕಿನ ಕುರಿಯ ಗ್ರಾಮದ ಅಜಲಾಡಿ ಹೊಸಮಾರು ಎಂಬಲ್ಲಿ ಸೋಮವಾರ ತಡರಾತ್ರಿ ನಡೆದಿದ್ದು, ಮಂಗಳವಾರ ಘಟನೆ ಬೆಳಕಿಗೆ ಬಂದಿದೆ.
ಹೊಸಮಾರು ನಿವಾಸಿ ಕೊಗ್ಗು ಸಾಹೇಬ್(62) ಮತ್ತು ಅವರ ಮೊಮ್ಮಗಳು ಸಮೀಹ ಬಾನು(16) ಕೊಲೆಗೀಡಾದವರು. ಕೊಗ್ಗು ಸಾಹೇಬ್ ಅವರ ಪತ್ನಿ ಖತೀಜಮ್ಮ(55) ಗಂಭೀರ ಗಾಯಗೊಂಡಿದ್ದು, ಪ್ರಜ್ಞಾಹೀನರಾಗಿ ಜೀವನ್ಮರಣ ಸ್ಥಿತಿಯಲ್ಲಿದ್ದಾರೆ. ಘಟನೆ ನಡೆದ ವೇಳೆಯಲ್ಲಿ ಮನೆಯಲ್ಲಿ ಈ ಮೂವರು ಮಾತ್ರವಿದ್ದ ಕಾರಣ ಹಂತಕರ ಕುರಿತು ಸುಳಿವು ಲಭ್ಯವಾಗಿಲ್ಲ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ. ಲಕ್ಷ್ಮೀ ಪ್ರಸಾದ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಕ್ರಂ ಭೇಟಿ, ಸಂಪ್ಯ ಠಾಣೆಯ ಎಸ್ಐ ಸಕ್ತಿವೇಲು ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಬೆರಳಚ್ಚು ತಜ್ಞರು ಮತ್ತು ಶ್ವಾನ ದಳವನ್ನು ಸ್ಥಳಕ್ಕೆ ಕರೆಸಲಾಗಿದೆ.
ಪೊಲೀಸ್ ತನಿಖೆ ವೇಳೆಯಲ್ಲಿ ಶ್ವಾನವು ಮನೆಯಿಂದ ಸುಮಾರು 300 ಮೀಟರ್ನಷ್ಟು ದೂರ ತೆರಳಿ, ಬಳಿಕ ಸಮೀಪದಲ್ಲಿನ ನಳ್ಳಿಯ ಬಳಿಗೆ ಸಾಗಿತ್ತು. ಇದರಿಂದ ಹಂತಕರು ನಳ್ಳಿಯಲ್ಲಿ ಕೈ ತೊಳೆದು ಮುಂದುವರಿದಿರುವ ಶಂಕೆ ಕಂಡು ಬಂದಿದೆ.