ಶಾಸಕರು ಮಾಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮತದಾರರಿಗೆ ಸ್ಪಷ್ಟ ಅರಿವಿದೆ: ರಮಾನಾಥ ರೈ
ಮಂಜೇಶ್ವರ, ಮೇ 13:ಅಭಿವೃದ್ಧಿ ಮರೀಚಿಕೆಯ ಬೊಂಬೆ ತೋರಿಸಿ ಜನರನ್ನು ವಂಚಿಸುತ್ತಿರುವ ಬಿಜೆಪಿಯ ಕುಟಿಲ ರಾಜಕೀಯಕ್ಕೆ ಕಿವಿಗೊಡದೆ, ನೈಜ ಅಭಿವೃದ್ದಿಯ ಪರವಾಗಿರುವ ಐಕ್ಯರಂಗ ಅ್ಯರ್ಥಿಯನ್ನು ವಿಜಯಗೊಳಿಸಬೇಕೆಂದು ಕರ್ನಾಟಕ ಅರಣ್ಯ ಖಾತೆ ಸಚಿವ ರಮಾನಾಥ ರೈ ಕರೆ ನೀಡಿದ್ದಾರೆ.
ರಾಜ್ಯ ವಿಧಾನ ಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಗುರುವಾರ ಸಂಜೆ ವರ್ಕಾಡಿ ಕೋಳ್ಯೂರಿನಲ್ಲಿ ಆಯೋಜಿಸಲಾದ ಚುನಾವಣಾ ಪ್ರಚಾರದ ಕುಟುಂಬ ಸಂಗಮ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಪ್ರಚಾರಪ್ರಿಯರಲ್ಲದ ಮಂಜೇಶ್ವರ ಶಾಸಕ ಪಿ.ಬಿ ಅಬ್ದುರ್ರಝಾಕ್ರ ಕಳೆದ ಐದು ವರ್ಷಗಳ ಯೋಜನಾ ಅನುಷ್ಠಾನದ ವಿವರಗಳನ್ನು ಜನ ಸಾಮಾನ್ಯರಿಗೆ ತಿರುಚಿ ನೀಡುವ ಪ್ರಯತ್ನಗಳನ್ನು ಎಡರಂಗ ಹಾಗೂ ಬಿಜೆಪಿ ಮಾಡುತ್ತಿದೆ. ಆದರೆ ಶಾಸಕರು ಮಾಡಿರುವ ಅಭಿವೃದ್ದಿ ಚಟುವಟಿಕೆಗಳ ಬಗ್ಗೆ ಮತದಾರರಿಗೆ ಸ್ಪಷ್ಟ ಅರಿವಿದೆಯೆಂದು ತಿಳಿಸಿದ ಅವರು, ಕ್ರಿಯಾತ್ಮಕ ಯೋಜನೆಗಳ ಇನ್ನಷ್ಟು ಮುಂದುವರಿಕೆಗಾಗಿ ಯುಡಿಎಫ್ ಮತ್ತೊಮ್ಮೆ ಪೂರ್ಣ ಗೆಲುವಿನೊಂದಿಗೆ ಆಡಳಿತ ನಡೆಸಲಿದೆಯೆಂದು ತಿಳಿಸಿದರು.
ಪಿ.ಸೋಮಪ್ಪ ಅಧ್ಯಕ್ಷತೆ ವಹಿಸಿದ್ದರು. ಸಚಿವ ಅಭಯಚಂದ್ರ ಜೈನ್, ಪ್ರತಾಪಚಂದ್ರ ಶೆಟ್ಟಿ, ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖೆಯ ದಿವ್ಯಾಪ್ರಭಾ ಚಿಲ್ತಡ್ಕ, ಎಐಸಿಸಿ ಸದಸ್ಯ ಪಿ.ವಿ.ಮೋಹನ್, ಹರ್ಷಾದ್ ವರ್ಕಾಡಿ, ಕೇಶವ ಪ್ರಸಾದ ನಾಣಿತ್ತಿಲು, ಮಮತಾ ದಿವಾಕರ್, ಶೋಭಾ ಸೋಮಪ್ಪ, ಹೇಮಲತಾ ಮೊದಲಾದವರು ಉಪಸ್ಥಿತರಿದ್ದರು. ಇಕ್ಬಾಲ್ ಸ್ವಾಗತಿಸಿ, ಮುಸ್ತಫಾ ವಂದಿಸಿದರು.