ನ. 25 ರಿಂದ ಡಿ.10: ಕ್ಷಯ ರೋಗ ಪತ್ತೆ ಆಂದೋಲನ
ಮಂಗಳೂರು, ನ. 20 : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನ. 25ರಿಂದ ಡಿ. 10ರವರಗೆ ಕ್ಷಯ ರೋಗ ಪತ್ತೆ ಆಂದೋಲನ ಕಾರ್ಯಾಚರಣೆ ನಡೆಯಲಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಕೃಷ್ಣ ರಾವ್ ಸುದ್ದಿಗೊಷ್ಠಿಯಲ್ಲಿಂದು ತಿಳಿಸಿದ್ದಾರೆ.
ದೇಶವನ್ನು 2025ರೊಳಗೆ ಕ್ಷಯ ರೋಗ ಮುಕ್ತ ದೇಶವನ್ನಾಗಿಸಬೇಕು ಎನ್ನುವ ನಿಟ್ಟಿನಲ್ಲಿ ಇನ್ನೂ ಜೀವಂತವಾಗಿರುವ ಕ್ಷಯ ರೋಗವನ್ನು ಪತ್ತೆ ಹಚ್ಚಿ ಅದನ್ನು ಗುಣಪಡಿಸಲು ಸೂಕ್ತ ಕ್ರಮ ಕೈ ಗೊಳ್ಳುವ ನಿಟ್ಟಿನಲ್ಲಿ ಈ ರೀತಿಯ ಜಾಗೃತಿ ಕಾರ್ಯಕ್ರಮ ಹಮಿ ಕೊಳ್ಳಲಾಗಿದೆ ಎಂದು ರಾಮಕೃಷ್ಣ ತಿಳಿಸಿದ್ದಾರೆ.
ಎರಡು ವಾರಕ್ಕಿಂತ ಹೆಚ್ಚು ಕೆಮ್ಮು, ರಾತ್ರಿ ಹೊತ್ತು ಹಗುರ ಜ್ವರ, ಎದೆಯಲ್ಲಿ ನೋವು, ಕಫದಲ್ಲಿ ರಕ್ತ, ತೂಕ ಕಡಿಮೆಯಾಗುವುದು, ಹಸಿವೆಯಾಗದಿರುವುದು ಈ ಎಲ್ಲಾ ಲಕ್ಷಣಗಳನ್ನು ಹೊಂದಿರುವವರು ಕಂಡು ಬಂದಲ್ಲಿ ಆರೋಗ್ಯ ಕಾರ್ಯಕರ್ತರು ಮನೆ ಮನೆ ಭೇಟಿ ನೀಡುವ ಸಂದರ್ಭದಲ್ಲಿ ಮಾಹಿತಿ ನಿಡಬೇಕಾಗಿ ಡಾ.ರಾಮಕೃಷ್ಣ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಈ ಆಂದೋಲನ ಕಾರ್ಯದ ಸಮೀಕ್ಷೆಗಾಗಿ 684 ತಂಡಗಳನ್ನು ರಚಿಸಲಾಗಿದೆ.1368 ಸದಸ್ಯರು ತಂಡದಲ್ಲಿ ಭಾಗ ವಹಿಸಲಿದ್ದಾರೆ ಎಂದು ರಾಮಕೃಷ್ಣ ತಿಳಿಸಿದ್ದಾರೆ.