ಉಡುಪಿ: ಮಾದಕ ದ್ರವ್ಯ ವ್ಯಸನ ಜಾಗೃತಿ ಜಾಥಾ
ಉಡುಪಿ, ನ.20: ಮಾದಕದ್ರವ್ಯ ವ್ಯಸನ, ಅಂರ್ತಜಾಲ ಸುರಕ್ಷತೆ, ಬಾಲಕಾರ್ಮಿಕತೆ ಮತ್ತು ಮಕ್ಕಳ ಬಿಕ್ಷಾಟನೆಯ ಕುರಿತು ಜಾಗೃತಿ ಮೂಡಿಸುವ ಜಾಥಾ ಕಾರ್ಯಕ್ರಮ ಉಡುಪಿಯಲ್ಲಿ ನಡೆಯಿತು.
ಜಾಥಾವನ್ನು ಉಡುಪಿ ಬೋರ್ಡ್ ಹೈಸ್ಕೂಲ್ನಲ್ಲಿ ರೋಟರಿ ಗವರ್ನರ್ ಬಿ.ಎನ್.ರಮೇಶ್ ಉದ್ಘಾಟಿಸಿ ಹಸಿರು ನಿಶಾನೆ ತೋರಿಸಿದರು. ಜಾಥಾವು ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿ ಅಂತಿಮವಾಗಿ ಬನ್ನಂಜೆ ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿಗಳ ಕೇರಿ ಎದುರು ಮುಕ್ತಾಯಗೊಂಡಿತು.
ಜಾಥಾದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು, ಸೈಂಟ್ ಮೇರಿಸ್ ಶಿರ್ವ ಕಾಪು, ಪ್ರಸನ್ನ ಸ್ಕೂಲ್ ಆಪ್ ಹೆಲ್ತ್ ಸಾಯನ್ಸ್ನ ಎಂಎಸ್ಡಬ್ಲ್ಯೂ ವಿದ್ಯಾರ್ಥಿಗಳು ಮತ್ತು ಸೈಂಟ್ ಮೇರಿಸ್ ಐಟಿಐ ಬೀಡಿನಗುಡ್ಡೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ನಿಶಾ ಜೇಮ್ಸ್, ಮಾದಕದ್ರವ್ಯ ವ್ಯಸನವೂ ಕೇವಲ ಆರೋಗ್ಯಕ್ಕಷ್ಟೇ ಮಾರಕವಲ್ಲ, ನಮ್ಮ ಮುಂದಿನ ಭವಿಷ್ಯಕ್ಕೂ ಮಾರಕ. ಅಲ್ಲದೇ ಕಠಿಣವಾದ ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಉಡುಪಿ ರೋಟರಿ ಅಧ್ಯಕ್ಷ ಜನಾರ್ದನ ಭಟ್, ಉಡುಪಿ ಮಕ್ಕಳ ಸಹಾಯವಾಣಿಯ ನಿರ್ದೇಶಕ ರಾಮಚಂದ್ರ ಉಪಾಧ್ಯಾಯ, ಸ್ವಚ್ಛ ಭಾರತ್ ಫ್ರೆಂಡ್ಸ್ನ ಗಣೇಶ್ ಪ್ರಸಾದ್ ಮತ್ತು ಜಗದೀಶ ಶೆಟ್ಟಿ ಹಾಗೂ ಮಕ್ಕಳ ಸಹಾಯಾಣಿ ತಂಡದವರು ಭಾಗವಹಿಸಿದ್ದರು.