ಯುಎಫ್ಸಿ ಮಕ್ಕಳ ಹಬ್ಬ-2019 : ಶಿರ್ವ, ಉದ್ಯಾವರದ ಶಾಲಾ ತಂಡಗಳಿಗೆ ಅಗ್ರಪ್ರಶಸ್ತಿ
ಉದ್ಯಾವರ, ನ.20: ಸ್ಥಳೀಯ ಸೇವಾ ಮತ್ತು ಸಾಂಸ್ಕೃತಿಕ ವೇದಿಕೆ ಉದ್ಯಾವರ ಫ್ರೆಂಡ್ಸ್ ಸರ್ಕಲ್ ಆಶ್ರಯದಲ್ಲಿ ನಡೆದ 10ನೇ ವರ್ಷದ ಉಡುಪಿ ಜಿಲ್ಲಾ ಮಟ್ಟದ ಶಾಲಾ ವಿದ್ಯಾರ್ಥಿಗಳ ಸಾಮೂಹಿಕ ನೃತ್ಯ ಸ್ಪರ್ಧೆ ‘ಯುಎಫ್ಸಿ ಮಕ್ಕಳಹಬ್ಬ-2019’ರ ಪ್ರೌಢ ಶಾಲಾ ವಿಭಾಗದಲ್ಲಿ ಶಿರ್ವದ ವಿದ್ಯಾವರ್ಧಕ ಹಿರಿಯ ಪ್ರಾಥಮಿಕ ಶಾಲೆಯ ಅಮೃತ್ ಆರ್. ನಾಯ್ಕಾ ಮತ್ತು ಬಳಗ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಉದ್ಯಾವರ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯ ಪ್ರತೀಕ್ಷಾ ಮತ್ತು ಬಳಗ ಅಗ್ರ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿವೆ.
ಉಳಿದಂತೆ ಪ್ರೌಢ ಶಾಲಾ ವಿಭಾಗದಲ್ಲಿ ಸಂಜನ್ ಶೆಟ್ಟಿ ಮತ್ತು ಬಳಗ ಜೇಸಿ ಆಂಗ್ಲ ಮಾಧ್ಯಮ ಶಾಲೆ ಕಾರ್ಕಳ (ದ್ವಿತೀಯ), ಪವಿತ್ರಾ ಮತ್ತು ಬಳಗ ಸರಕಾರಿ ಪದವಿ ಪೂರ್ವ ಕಾಲೇಜು ಉದ್ಯಾವರ (ತೃತೀಯ).
ಪ್ರಾಥಮಿಕ ಶಾಲಾ ವಿಭಾಗ: ಸಿಂಚನಾ ಮತ್ತು ಬಳಗ ಹಿಂದೂ ಹಿರಿಯ ಪ್ರಾಥಮಿಕ ಶಾಲೆ ಉದ್ಯಾವರ (ದ್ವಿತೀಯ), ತನಿಷಾ ಮತ್ತು ಬಳಗ ಜೇಸಿ ಆಂಗ್ಲ ಮಾಧ್ಯಮ ಹಿರಿಯ ಪಾ್ರಥಮಿಕ ಶಾಲೆ ಕಾರ್ಕಳ (ತೃತೀಯ).
ವಿಜೇತ ತಂಡಗಳಿಗೆ ಎರಡೂ ವಿಭಾಗಗಳಲ್ಲಿ ಪ್ರತ್ಯೇಕವಾಗಿ ತಲಾ 5,000 ರೂ., 3,000 ರೂ., 2,000ರೂ. ಮತ್ತು ಸ್ಮರಣಿಕೆ, ಪ್ರಮಾಣ ಪತ್ರ ವಿತರಿಸಲಾಯಿತು. ಭಾಗವಹಿಸಿದ ಎಲ್ಲಾ ತಂಡಗಳಿಗೆ 1,000ರೂ. ಮತ್ತು ಪುಸ್ತಕ ಸ್ಮರಣಿಕೆ ಹಾಗೂ ಪ್ರತಿಯೊಬ್ಬರಿಗೂ ಪ್ರಮಾಣ ಪತ್ರ ವಿತರಿಸಲಾಯಿತು.
ಸಮಾರೋಪ: ಉದ್ಯಾವರ ಶ್ರೀ ವಿಠೋಬ ರುಖುಮಾಯಿ ನಾರಾಯಣ ಗುರು ಮಂದಿರದಲ್ಲಿ ನಡೆದ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಖ್ಯಾತ ಭರತ ನಾಟ್ಯ ತಜ್ಞೆ, ಮಣಿಪಾಲ ಹೆಜ್ಜೆಗೆಜ್ಜೆ ಪ್ರತಿಷ್ಠಾನ ನಿರ್ದೇಶಕಿ ಯಶಾ ರಾಮಕೃಷ್ಣ ಅವು ಸಮಾರೋಪ ಭಾಷಣ ಮಾಡಿದರು.
ಮುಖ್ಯ ಅತಿಥಿಗಳಾಗಿ ಉಡುಪಿ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಪ್ರಾಂಶುಪಾಲೆ ಡಾ.ಸುಕನ್ಯಾ ಮಾರ್ಟೀಸ್, ಉದ್ಯಾವರ ಗ್ರಾಪಂನ ಉಪಾಧ್ಯಕ್ಷ ರಿಯಾಝ್ ಪಳ್ಳಿ ಭಾಗವಹಿಸಿದ್ದರು. ಅಧ್ಯಕ್ಷತೆಯನ್ನು ನ್ಯಾಯವಾದಿ ಬಿ. ನಾಗರಾಜ್ ವಹಿಸಿದ್ದರು. ವೇದಿಕೆಯಲ್ಲಿ ಸಂಸ್ಥೆಯ ಅಧ್ಯಕ್ಷ ತಿಲಕ್ರಾಜ್ ಸಾಲ್ಯಾನ್, ಪ್ರಧಾನ ಕಾರ್ಯದರ್ಶಿ ಗಿರೀಶ್ ಗುಡ್ಡೆಯಂಗಡಿ ಉಪಸ್ಥಿತರಿದ್ದರು. ಸಂಸ್ಥೆಯ ಉಪಾಧ್ಯಕ್ಷೆ ಸುಗಂಧಿ ಶೇಖರ್ ಸ್ವಾಗತಿಸಿದರು. ನಿರ್ದೇಶಕ ಉದ್ಯಾವರ ನಾಗೇಶ್ ಕುಮಾರ್ ಸ್ಪರ್ಧೆಯ ಫಲಿತಾಂಶ ಘೋಷಿಸಿದರು. ಹಿರಿಯ ಸದಸ್ಯೆ ಮೇರಿ ಡಿಸೋಜಾ ವಂದಿಸಿ, ಮಾಜಿ ಅಧ್ಯಕ್ಷ ಆಬಿದ್ ಆಲಿ ಕಾರ್ಯಕ್ರಮ ನಿರೂಪಿಸಿದರು.