ನ. 24: ಯಕ್ಷೋತ್ಸಾಹಿ ಯಕ್ಷಗಾನ ಅಧ್ಯಯನ ಕೇಂದ್ರ ವಾರ್ಷಿಕೋತ್ಸವ
ಉಡುಪಿ, ನ.21: ಪರ್ಯಾಯ ಪಲಿಮಾರು ಶ್ರೀಕೃಷ್ಣ ಮಠದ ಆಶ್ರಯ ದಲ್ಲಿ ಯಕ್ಷೋತ್ಸಾಹಿ ಯಕ್ಷಗಾನ ಅಧ್ಯಯನ ಕೇಂದ್ರದ ವಾರ್ಷಿಕೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವು ನ.24ರಂದು ಸಂಜೆ 7 ಗಂಟೆಗೆ ಮಠದ ರಾಜಾಂಗಣದಲ್ಲಿ ನಡೆಯಲಿದೆ.
ಮಂಗಳೂರಿನ ಯುವ ಪ್ರತಿಭೆ ಕೀರ್ತನ್ ನಾಯ್ಗ ಅವರಿಗೆ ‘ಯಕ್ಷೋತ್ಸಾಹಿ’ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಇದೇ ಸಂದರ್ಭದಲ್ಲಿ ತಂಡದ ಸದಸ್ಯ ಶ್ರೀನಿಧಿ ಆಚಾರ್ಯ ಬರೆದ ಸುಮ ಸಲ್ಲಾಪ ಕೃತಿ ಬಿಡುಗಡೆಗೊಳ್ಳಲಿದೆ ಎಂದು ಕೇಂದ್ರದ ಸಂಚಾಲಕ ಶ್ರೀನಿಧಿ ಆಚಾರ್ಯ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಪರ್ಯಾಯ ಪಲಿಮಾರು ಶ್ರೀವಿದ್ಯಾಧೀಶ ತೀರ್ಥ ಸ್ವಾಮೀಜಿ ಹಾಗೂ ಕಿರಿಯ ಯತಿ ಶ್ರೀವಿದ್ಯಾರಾಜೇಶ್ವರ ತೀರ್ಥ ಸ್ವಾಮೀಜಿ ಅನುಗ್ರಹ ಸಂದೇಶ ನೀಡಲಿರುವರು. ಅಧ್ಯಕ್ಷತೆಯನ್ನು ಮಣಿಪಾಲ ಗಾಂಧಿ ಅಧ್ಯಯನ ಕೇಂದ್ರ ಮತ್ತು ಯಕ್ಷಗಾನ ಕೇಂದ್ರದ ನಿರ್ದೇಶಕ ಪ್ರೊ.ವರೇಶ್ ಹಿರೇಗಂಗೆ ವಹಿಸಲಿರುವರು.
ಸಭಾ ಕಾರ್ಯಕ್ರಮದ ಪೂರ್ವದಲ್ಲಿ ತಂಡದ ಸದಸ್ಯರಿಂದ ‘ವಿದ್ಯುನ್ಮತಿ ಪರಿಣಯ’ ಎಂಬ ಬಡಗುತಿಟ್ಟಿನ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಇದೇ ಯಕ್ಷಗಾನಕ್ಕೆ ಸಂಬಂಧಿಸಿ ದಿವಂಗತ ವಾಸುದೇವ ಪೈ ಸ್ಮಾರಕ ಛಾಯಾಚಿತ್ರ ಸ್ಪರ್ಧೆಯನ್ನು ಏರ್ಪಡಿಸಲಾ ಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕೇಂದ್ರದ ಅಧ್ಯಕ್ಷೆ ಸುಮಿತ್ರಾ ಕೆರೆಮಠ, ಕೋಶಾಧಿಕಾರಿ ಕಾರ್ತಿಕ್ ಪ್ರಭು ಉಪಸ್ಥಿತರಿದ್ದರು.