ಸಮುದಾಯೋತ್ಸವ್-2020 ಸ್ಟಿಕ್ಕರ್-ಪೋಸ್ಟರ್ ಅನಾವರಣ
ಉಡುಪಿ, ನ.21: ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ವತಿಯಿಂದ ಜ.19 ರಂದು ಕಲ್ಯಾಣಪುರ ಮೌಂಟ್ ರೋಸರಿ ಚರ್ಚಿನ ಆವರಣದಲ್ಲಿ ಆಯೋಜಿಸಲಾಗಿರುವ ಧರ್ಮಪ್ರಾಂತ ಮಟ್ಟದ ಶ್ರೀಸಾಮಾನ್ಯರ ಸಮ್ಮೇಳನ ಸಮುದಾಯೋತ್ಸವ್-2020 ಇದರ ಸ್ಟಿಕ್ಕರ್ ಮತ್ತು ಪೋಸ್ಟರ್ ಅನಾವರಣ ಕಾರ್ಯಕ್ರಮ ಗುರುವಾರ ಸಂಘಟನೆಯ ಸಭಾಭವನದಲ್ಲಿ ಜರಗಿತು.
ಸ್ಟಿಕ್ಕರ್ ಮತ್ತು ಪೋಸ್ಟರ್ನ್ನು ಪತ್ರಕರ್ತರಾದ ನಾಗರಾಜ ರಾವ್, ಉದ್ಯಮಿ ಗಳಾದ ಮೊಹಮ್ಮದ್ ಮೌಲಾ, ಗೌತಮ್ ನಾವಡ ಹಾಗೂ ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಇದರ ಆಧ್ಯಾತ್ಮಿಕ ನಿರ್ದೇಶಕ ವಂ.ಫರ್ಡಿನಾಂಡ್ ಗೊನ್ಸಾಲ್ವಿಸ್ ಜಂಟಿಯಾಗಿ ಅನಾವರಣಗೊಳಿಸಿದರು.
ಬಳಿಕ ಮಾತನಾಡಿದ ವಂ.ಫರ್ಡಿನಾಂಡ್ ಗೊನ್ಸಾಲ್ವಿಸ್, ಪ್ರತಿಯೊಬ್ಬರು ಸಮಾಜದಲ್ಲಿ ಪರಸ್ಪರ ಸೇತುವೆಗಳನ್ನು ಕಟ್ಟುವ ಕೆಲಸವನ್ನು ಮಾಡುವುದರೊಂದಿಗೆ ಸಮಾಜದಲ್ಲಿ ಪ್ರತಿಯೊಬ್ಬರು ಅಭಿವೃದ್ಧಿ ಹೊಂದಬೇಕು. ಇಂತಹ ಸಕಾರಾತ್ಮಕ ಧೋರಣೆಯನ್ನು ಹೊಂದಿದ್ದರೆ ಮಾತ್ರ ಸೌಹಾರ್ದಯುತ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು.
ಮೊಹಮ್ಮದ್ ಮೌಲಾ ಮಾತನಾಡಿ, ಪ್ರತಿಯೊಂದು ಸಮಾಜದವರು ತಮ್ಮ ಮಧ್ಯೆ ಕೇವಲ ಗೋಡೆಗಳನ್ನು ಕಟ್ಟುವ ಕೆಲಸಗಳನ್ನು ಮಾಡದೇ ಸೌಹಾರ್ದ ಸಮಾಜ ನಿರ್ಮಿಸುವತ್ತ ಪ್ರಯತ್ನಿಸಬೇಕು ಎಂದು ತಿಳಿಸಿದರು.
ನಾಗರಾಜ್ ರಾವ್ ಮಾತನಾಡಿ, ಸಮಾಜದಲ್ಲಿ ಯಾವುದೇ ಕಾರ್ಯಕ್ರಮ ಮಾಡುವಾಗ ಪ್ರತಿಯೊಬ್ಬರ ಸಹಕಾರ ಬಯಸುವುದು ಸಾಮಾನ್ಯ. ಪ್ರತಿ ಯೊಬ್ಬರು ತಮ್ಮ ಸೇವೆಯನ್ನು ತಮ್ಮ ವ್ಯಾಪ್ತಿಯಲ್ಲಿ ನೀಡಿದಾಗ ಯಾವುದೇ ಕಾರ್ಯಕ್ರಮ ಕೂಡ ಯಶಸ್ವಿಯಾಗಲು ಸಾಧ್ಯ ಎಂದರು.
ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಕಾರ್ಯದರ್ಶಿ ಸಂತೋಷ್ ಕರ್ನೆ ಲಿಯೋ, ಸಮ್ಮೇಳನದ ಸಂಚಾಲಕ ಎಲ್ ರೋಯ್ ಕಿರಣ್ ಕ್ರಾಸ್ತಾ, ನಿಕಟ ಪೂರ್ವ ಅಧ್ಯಕ್ಷ ವಲೇರಿಯನ್ ಫೆರ್ನಾಂಡಿಸ್, ಮಾಜಿ ಅಧ್ಯಕ್ಷರಾದ ಆಲ್ಫೋನ್ಸ್ ಡಿಕೋಸ್ತಾ, ವಾಲ್ಟರ್ ಸಿರಿಲ್ ಪಿಂಟೊ ಉಪಸ್ಥಿತರಿದ್ದರು. ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಇದರ ಅಧ್ಯಕ್ಷ ಆಲ್ವಿನ್ ಕ್ವಾಡ್ರಸ್ ಸ್ವಾಗತಿಸಿದರು. ಸಮು ದಾಯೋತ್ಸವ್ ಸಮಿತಿಯ ಕಾರ್ಯದರ್ಶಿ ಮೇರಿ ಡಿಸೋಜ ವಂದಿಸಿದರು.
ಸಮ್ಮೇಳನದಲ್ಲಿ ಸುಮಾರು 3000 ಕೆಥೊಲಿಕ್ ಬಂಧುಗಳು ಭಾಗವಹಿಸುವ ನಿರೀಕ್ಷೆಯಿದ್ದು ಮಾಜಿ ರಾಜ್ಯಪಾಲೆ ಮಾರ್ಗರೇಟ್ ಆಳ್ವಾ ಉದ್ಘಾಟಿಸಲಿರು ವರು. ಸಮಾರೋಪದಲ್ಲಿ ಬೆಂಗಳೂರು ಮಹಾ ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ವಂ.ಪೀಟರ್ ಮಚಾದೊ ಮೊದಲಾದವರು ಭಾಗವಹಿಸಲಿರುವರು.