ಉಚ್ಚಿಲ ಬೋವಿ ವಿದ್ಯಾಸಂಸ್ಥೆಗಳ ಶತಮಾನೋತ್ಸವ ಸಮಾರೋಪ
ಉಳ್ಳಾಲ, ನ.22: ಉಚ್ಚಿಲ ಬೋವಿ ವಿದ್ಯಾಸಂಸ್ಥೆಗಳ ಶತಮಾನೋತ್ಸವದ ಸಮಾರೋಪ ಸಮಾರಂಭ ಇತ್ತೀಚೆಗೆ ಜರುಗಿತು.
ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಬಿ. ವಿವೇಕ ರೈ ಮಾತನಾಡಿ ಶುಭ ಹಾರೈಸಿದರು.
ಶತಮಾನೋತ್ಸವ ಆಚರಣಾ ಸಮಿತಿಯ ಅಧ್ಯಕ್ಷ ಎನ್.ಜಿ. ಮೋಹನ್ ಪ್ರಸ್ತಾವನೆಗೈದು ಸಂಸ್ಥೆಯ ಮುಂದಿನ ಯೋಜನೆ, ಆಶೋತ್ತರಗಳ ಬಗ್ಗೆ ತಿಳಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಆಗಮಿಸಿ ಶುಭ ಹಾರೈಸಿದರು.
ಇದೇ ಸಂದರ್ಭ ವಿವಿಧ ಕ್ಷೇತ್ರಗಳಲ್ಲಿನ ಸಾಧಕರಾದ ಡಾ.ಪುರುಷೋತ್ತಮ ಬಿಳಿಮಲೆ, ಮುಹಮ್ಮದಲಿ ಉಚ್ಚಿಲ್, ನೀಲೇಶ್ವರ ಪದ್ಮನಾಭ ತಂತ್ರಿ, ಐವನ್ ಡಿಸೋಜರನ್ನು ಸನ್ಮಾನಿಸಲಾಯಿತು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕೆ.ಸಿ.ನಗರದ ಮರ್ಹಬಾ ದಫ್ ತಂಡವು ಪ್ರಸ್ತುತ ಪಡಿಸಿದ ಬಶೀರ್ ಅವರ ದೇಶಭಕ್ತಿ ಗೀತೆಗಳು ಪ್ರೇಕ್ಷಕರ ಮನಸೂರೆಗೊಂಡವು. ತೃಪ್ತಿ ಉಚ್ಚಿಲ್ ಅವರ ರಿದಂ ಮೆಲೋಡೀಸ್ ಗಾನ ವೈಭವ ಮೆರಗು ನೀಡಿದವು.
ದೃಷ್ಟಿ ತಂಡದಿಂದ ಭರತ ನಾಟ್ಯ ಕಾರ್ಯಕ್ರಮ ಹಾಗೂ ಮುಲ್ಕಿ ನವ ವೈಭವ ಕಲಾವಿದರಿಂದ ತುಳುನಾಡ ವೈಭವ ಪ್ರದರ್ಶನಗೊಂಡಿತು.