ಸಮಾಜದ ಅಭಿವೃದ್ಧಿಗೆ ಸೀಮೆಯ ಅರಸರ ಕೊಡುಗೆ ಅನನ್ಯ: ಚಂದ್ರಶೇಖರ ಸ್ವಾಮೀಜಿ
ಮುಲ್ಕಿ: ಮುಲ್ಕಿ ಸೀಮೆಯ ಅರಸರು ಪಟ್ಟದೈಸಿರಿಗೆ ಕಳಶಪ್ರಾಯರಾಗಿ, ಸೀಮೆಯ ಕಂಬಳ-ಬಸದಿಗೆ ವಿಶ್ವಮನ್ನಣೆ, ಗುತ್ತು-ಬರ್ಕೆ-ಗರಡಿಯ ಸಂಪ್ರದಾಯಿಕ ಹಿರಿತನ, ಮುಲ್ಕಿ ಅರಮನೆಯ ಹಿರಿಮೆ-ಗರಿಮೆಯನ್ನು ಜಗದಗಲ ಪಸರಿಸಿ, ದೈವಸ್ಥಾನ-ದೇವಾಲಯಗಳ ಜೀರ್ಣೋದ್ಧಾರಕ್ಕೆ ಧರ್ಮವೇ ಬದುಕೆಂಬ ಹಾದಿಯಲ್ಲಿ ಸಹೃದಯಿ ವ್ಯಕ್ತಿತ್ವದಿಂದ ಸೀಮೆಯ ಭಕ್ತರಿಗೆ ನಿರ್ಲಿಪ್ತ ಭಾವೈಕ್ಯತೆಯನ್ನು ಮೂಡಿಸುತ್ತಿರುವ ಶ್ರೀ ಎಂ. ದುಗ್ಗಣ್ಣ ಸಾವಂತ ಅವರು ಸಮಾಜದ ಅಭಿವೃದ್ಧಿಗೆ ನೀಡಿದ ಕೊಡುಗೆ ಅಪಾರ ಎಂದು ಬೆಂಗಳೂರಿನ ಅಂತರ್ ರಾಷ್ಟ್ರೀಯ ವಾಸ್ತುತಜ್ಞರು, ವೈಜ್ಞಾನಿಕ ಜ್ಯೋತಿಷ್ಯರಾದ ಚಂದ್ರಶೇಖರ ಸ್ವಾಮೀಜಿ ಹೇಳಿದರು.
ಅವರು ಪಡುಪಂಣಂಬೂರಿನ ಮುಲ್ಕಿ ಸೀಮೆಯ ಅರಮನೆಯಲ್ಲಿ ಸೀಮೆಯ ಅರಸರ 11ನೆ ಪಟ್ಟಾಭಿಷೇಕದ ದಿನದಂದು ಶ್ರೀ ದುಗ್ಗಣ್ಣ ಸಾವಂತ ಅರಸರನ್ನು ಚಂದ್ರಶೇಖರ ಸ್ವಾಮೀಜಿ ಆಶ್ರಮದ ವತಿಯಿಂದ ಗೌರವಿಸಿ, ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ವಹಿಸಿದ್ದರು. ಸಮಾರಂಭದ ಮುಖ್ಯ ಅತಿಥಿಗಳಾಗಿ ಚಂದ್ರಶೇಖರ ಸ್ವಾಮೀಜಿ ಆಶ್ರಮದ ನಿರ್ದೇಶಕಿ ರಜನಿ ಚಂದ್ರಶೇಖರ ಭಟ್. ಕಿನ್ನಿಗೋಳಿ ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ, ಬಾಲಚಂದ್ರರಾವ್ ನಂದಳಿಕೆ, ಗೌತಮ್ ಜೈನ್ ಮುಲ್ಕಿ ಅರಮನೆ, ದಿನೇಶ್ ಸುವರ್ಣ ಪಡುಪಣಂಬೂರು, ಆಶ್ರಮದ ಸಂಚಾಲಕ ಪುನೀತ ಕೃಷ್ಣ ಉಪಸ್ಥಿತರಿದ್ದರು.
ಗೌತಮ್ ಜೈನ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.