ಪೋಷಕರು ಮಕ್ಕಳಲ್ಲಿ ಒಳ್ಳೆಯ ಕನಸು ಬಿತ್ತಿ ಸಕಾರಗೊಳಿಸಬೇಕು-ಚಂದ್ರಹಾಸ ರೈ
ಸವಣೂರು `ಸಂಭ್ರಮ ರಶ್ಮಿ' ಕಾರ್ಯಕ್ರಮ
ಪುತ್ತೂರು: ಮಕ್ಕಳಲ್ಲಿ ಒಳ್ಳೆಯ ಕನಸುಗಳನ್ನು ಬಿತ್ತಿ, ಅದನ್ನು ಸಾಕಾರಗೊಳಿಸುವ ಕೆಲಸವನ್ನು ಪೋಷಕರು ಮಾಡಬೇಕು. ಈ ಕಾರ್ಯದಲ್ಲಿ ಶಿಕ್ಷಕರ ಮಾರ್ಗದರ್ಶನ ಅಗತ್ಯ. ಸಮಗ್ರ ಶಿಕ್ಷಣದಿಂದ ಮಾತ್ರ ವ್ಯಕ್ತಿತ್ವ ಪರಿಪೂರ್ಣವಾಗಲು ಸಾಧ್ಯ ಎಂದು ಕಬಕ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಬಿ.ಚಂದ್ರಹಾಸ್ ರೈ ಅವರು ಹೇಳಿದರು.
ಸವಣೂರು ವಿದ್ಯಾರಶ್ಮಿ ವಿದ್ಯಾಲಯದಲ್ಲಿ ಶನಿವಾರ ನಡೆದ `ಸಂಭ್ರಮ ರಶ್ಮಿ' ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.
ಕರಾವಳಿ ಜಿಲ್ಲೆಯ ಮಕ್ಕಳು ಇಂಜಿನೀಯರ್, ವೈದ್ಯ ವೃತ್ತಿಯತ್ತ ತಮ್ಮ ಗಮನ ಕೇಂದ್ರಿಕೃತರಾಗುವುದು ಬಿಟ್ಟು, ಎಎಸ್, ಐಪಿಎಸ್ನಂತಹ ಉನ್ನತ ಹುದ್ದೆಯನ್ನು ಪಡೆಯುವ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಅಶ್ವಿನ್.ಎಲ್.ಶೆಟ್ಟಿ ಅವರು ಮಾತನಾಡಿ ವಿದ್ಯಾರ್ಥಿಗಳು ಯಾವುದೇ ಒತ್ತಡವಿಲ್ಲದೆ ಶಿಕ್ಷಣ ಪಡೆಯುವ ಮೂಲಕ ತಮ್ಮ ವಿದ್ಯಾರ್ಥಿ ಜೀವನದಲ್ಲಿ ಪ್ರತಿಭಾ ಸಂಪನ್ನರಾಗಬೇಕು ಎಂದರು.
ವಿದ್ಯಾರಶ್ಮಿ ಶಿಕ್ಷಣ ಸಂಸ್ಥೆಯ ಟ್ರಸ್ಟಿಗಳಾದ ಎನ್.ಸುಂದರ ರೈ ಸವಣೂರು, ಡಾ.ರಾಜೇಶ್ ರೈ ಮಂಗಳೂರು, ರಶ್ಮಿ ಆಶ್ವಿನ್ ಶೆಟ್ಟಿ ಮಂಗಳೂರು, ಸಂಸ್ಥೆಯ ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷ ಪ್ರದೀಪ್ ಕುಮಾರ್ ರೈ ಪನ್ನೆ, ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಪ್ರಾಶಂಪಾಲೆ ರಾಜಲಕ್ಷ್ಮಿ.ಎಸ್.ರೈ ಉಪಸ್ಥಿತರಿದ್ದರು.
ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಕೆ.ಸೀತಾರಾಮ ರೈ ಸವಣೂರು ಅವರು ಸ್ವಾಗತಿಸಿದರು. ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲ ಸೀತಾರಾಮ ಕೇವಳ ವರದಿ ವಾಚಿಸಿದರು. ವಿದ್ಯಾರ್ಥಿ ನಾಯಕ ಯಶಸ್ ವಂದಿಸಿದರು, ವಿದ್ಯಾರ್ಥಿ ಅಜ್ಮಲ್ ಕಾರ್ಯಕ್ರಮ ನಿರೂಪಿಸಿದರು.