ಅನಿವಾಸಿ ಕನ್ನಡಿಗರ ಒಕ್ಕೂಟ ಅಬುಧಾಬಿ ವತಿಯಿಂದ ಕ್ರಿಕೆಟ್ ಪಂದ್ಯಾಟ
ಅಬುಧಾಬಿ : ಅನಿವಾಸಿ ಕನ್ನಡಿಗರ ಒಕ್ಕೂಟ ಅಬುಧಾಬಿ ವತಿಯಿಂದ ಯುಎಇ ನ್ಯಾಷನಲ್ ಡೇ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಲಾಯಿತು.
ಈ ಪಂದ್ಯಾಟಕ್ಕೆ ಕರ್ನಾಟಕದ ವಿವಿಧ ಜಿಲ್ಲೆಗಳ 6 ತಂಡಗಳನ್ನು ಆಹ್ವಾನಿಸಲಾಯಿತು. ಕರ್ನಾಟಕ ವಾರಿಯರ್ಸ್, ಅಬುಧಾಬಿ ಟೈಗರ್ಸ್, ಟೀಮ್ ಮುಸಫ್ಫಾ, ಎಲೆಕ್ಟ್ರಾ ಚಾಲೆಂಜರ್ಸ್, ಅರೇಬಿಯನ್ ಲಯನ್ಸ್ ಹಾಗು ಎಲೆಕ್ಟ್ರಾ ರಾಯಲ್ಸ್ ತಂಡಗಳು ಭಾಗವಹಿಸಿದ್ದವು.
ಅಶ್ರಫ್ ಅಹ್ಮದ್ ಬೈಲೂರ್ ಅನಿವಾಸಿ ಕನ್ನಡಿಗರ ಒಕ್ಕೂಟದ ಅಧ್ಯಕ್ಷ ಶಾಫಿ ತಿಂಗಳಾಡಿ ಅವರ ಎಸೆತವನ್ನೆದುರಿಸಿ ನ್ಯಾಷನಲ್ ಡೇ ಕಪ್ ಕ್ರಿಕೆಟ್ ಕ್ರೀಡಾಕೂಟವನ್ನು ಉದ್ಘಾಟಿಸಿದರು.
ಉದ್ಘಾಟನಾ ಪಂದ್ಯದಲ್ಲಿ ಎಲೆಕ್ಟ್ರಾ ಚಾಲೆಂಜರ್ಸ್ ತಂಡವು ಸುಲಭವಾಗಿ ಅಬುಧಾಬಿ ಟೈಗರ್ಸ್ ತಂಡವನ್ನು ಮಣಿಸಿ ನೇರ ಸೆಮಿಫೈನಲ್ ಗೆ ಏರಿತು.
ಸಾದಿಕ್ ಶೃಂಗೇರಿ ಅವರ ಅರ್ಧ ಶತಕದ ನೆರವಿನಿಂದ ಟೀಮ್ ಮುಸಫ್ಫಾ ತಂಡವು ಕರ್ನಾಟಕ ವಾರಿಯರ್ಸ್ ತಂಡವನ್ನು ಸೋಲಿಸಿ ಸೆಮಿಫೈನಲ್ ಗೆ ಅರ್ಹತೆ ಪಡೆಯಿತು.
ಮತ್ತೊಂದು ಪಂದ್ಯದಲ್ಲಿ ಅರೇಬಿಯನ್ ಲಯನ್ಸ್ ಕೊಟ್ಟ ಕಠಿಣ ಸ್ಪರ್ಧೆಯನ್ನು ಗೆಲುವನ್ನಾಗಿಸಿದ ಎಲೆಕ್ಟ್ರಾ ರಾಯಲ್ಸ್ ತಂಡವು ಸೆಮಿಫೈನಲ್ ಗೆ ಪ್ರವೇಶಿಸಿತು.
ಕೊನೆಯ ಲೀಗ್ ಪಂದ್ಯದಲ್ಲಿ ಕೊನೆಯ ಎಸೆತದಲ್ಲಿ ನಾಲ್ಕು ರನ್ ಅವಶ್ಯಕತೆ ಇದ್ದಾಗ ತಂಡದ ನಾಯಕ ಹಾರೂನ್ ಕೊಡ್ಲಿಪೇಟ್ ಬೌಂಡರಿ ಹೊಡೆದು ಕರ್ನಾಟಕ ವಾರಿಯರ್ಸ್ ತಂಡವನ್ನು ಸೆಮಿಫೈನಲ್ ಗೆ ಏರಿಸಿದರು.
ರೋಮಾಂಚಕಾರಿಯಾದ ಮೊದಲ ಸೆಮಿಫೈನಲ್ ಸಾದಿಕ್ ರವರು ಅರ್ಧ ಶತಕ ಗಳಿಸಿ ತಮ್ಮ ತಂಡವಾದ ಟೀಮ್ ಮುಸಫ್ಫಾವನ್ನು ಫೈನಲ್ ಗೇರಿಸಿದರು. ಎರಡನೇ ಸೆಮಿಫೈನಲ್ ನಲ್ಲಿ ಸಾಂಘಿಕ ಪ್ರಯತ್ನ ನಡೆಸಿದ ಕರ್ನಾಟಕ ವಾರಿಯರ್ಸ್ ಗೆಲುವಿನ ನಗೆ ಬೀರಿತು.
ಪ್ರತಿಯೊಂದು ಎಸೆತದಲ್ಲೂ ಕುತೂಹಲ ಮೂಡಿಸಿದ ಫೈನಲ್ ಪಂದ್ಯದಲ್ಲಿ ಗೆಲುವು ಎರಡು ತಂಡಗಳ ಮದ್ಯೆ ಅತ್ತಿಂದಿತ್ತ ಓಡಿ ಕೊನೆಗೆ ಟೀಮ್ ಮುಸಫ್ಫಾದ ಕೊರಳಿಗೆ ಬಿತ್ತು. ಅಜೇಯ ಆಟ ಆಡಿದ ಟೀಮ್ ಮುಸಫ್ಫಾ ಚಾಂಪಿಯನ್ ಆದರೆ ರನ್ನರ್ ಅಪ್ ಗೆ ಕರ್ನಾಟಕ ವಾರಿಯರ್ಸ್ ತೃಪ್ತಿ ಪಟ್ಟುಕೊಂಡಿತು.
ಸಮಾರೋಪ ಸಮಾರಂಭದಲ್ಲಿ ಅತಿಥಿಗಳಾಗಿ ರಝಾಕ್ ಅಡ್ಯನಡ್ಕ, ಅಸ್ಲಾಂ ಕಾಪು , ಅಶ್ರಫ್ ಅಹ್ಮದ್ ಬೈಲೂರು ಹಾಗು ಬಶೀರ್ ಸಂಪ್ಯ ಭಾಗವಸಿದ್ದರು. ಅನಿವಾಸಿ ಕನ್ನಡಿಗರ ಒಕ್ಕೂಟ್ಟದ ಅಧ್ಯಕ್ಷ ಶಾಫಿ ತಿಂಗಳಾಡಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾದ ರಝಾಕ್ ಅಡ್ಯನಡ್ಕ ಮಾತಾಡಿ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಬಂದ ನಿಮ್ಮನ್ನು ನೋಡಲು ಖುಷಿಯಾಗುತ್ತಿದೆ, ಇದೇ ರೀತಿ ಇನ್ನು ಹಲವು ಕ್ರೀಡಾಕೂಟವನ್ನು ಆಯೋಜಿಸಿ ಮತ್ತು ಎಂದಿಗೂ ನಮ್ಮ ಸಹಕಾರ ನಿಮಗಿದೆ ಎಂದರು ಮತ್ತು ನ್ಯಾಷನಲ್ ಡೇ ಕಪ್ ಜಯಗಳಿಸಿದ ಟೀಮ್ ಮುಸಫ್ಫಾ ಕ್ಯಾಪ್ಟನ್ ಮುಬಾರಕ್ ಫರಂಗಿಪೇಟೆ ಅವರಿಗೆ ಟ್ರೋಫಿ ವಿತರಿಸದರು.
ಅನಿವಾಸಿ ಕನ್ನಡಿಗರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಶರೀಫ್ ಸರ್ವೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕ್ರಿಕೆಟ್ ಟೂರ್ನಮೆಂಟ್ ನಿರ್ದೇಶಕರಾದ ಯಾಹ್ಯಾ ಕೊಡ್ಲಿಪೇಟ್ ವಂದಿಸಿದರು. ಅಂಪೈರ್ ಆಗಿ ಇಕ್ಬಾಲ್ ಆತೂರ್, ಬಷೀರ್ ಕೊಡ್ಲಿಪೇಟೆ, ಮುಸ್ತಫಾ ಸವಣೂರು, ಸಮದ್ ಸಂಟ್ಯಾರ್ ಸಹಕರಿಸಿದರು.