ಉಡುಪಿ: ಮೈಸೂರು ಸಹೋದರರಿಂದ ವಯೋಲಿನ್ ವಾದನ
ಉಡುಪಿ, ಡಿ.3: ಉಡುಪಿಯ ಹಿರಿಯ ವಯೋಲಿನ್ ವಾದಕಿ ವಸಂತಿ ರಾಮ ಭಟ್ ಇವರ ಜನ್ಮನಕ್ಷತ್ರ ಪ್ರಯುಕ್ತ ವಿಶೇಷ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಇಂದು ಸಂಜೆ ಜರಗಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಅಂತಾರಾಷ್ಟ್ರೀಯ ಖ್ಯಾತಿಯ ವಯೋಲಿನ್ ವಾದಕ ವಿದ್ವಾನ್ ಎಂ. ಮಂಜುನಾಥ್, ಸಂಗೀತ ಒಂದು ದೊಡ್ಡ ಪ್ರಪಂಚ. ಕಛೇರಿ ಮತ್ತು ಕಾರ್ಯಕ್ರಮಗಳು ಕೇವಲ ಅದರ ಒಂದು ಮುಖ. ಭಕ್ತಿ ಅರ್ಪಣೆಗೆ ಸಂಗೀತ ಒಂದು ಬಹುಮುಖ್ಯ ಮಾಧ್ಯಮ ಎಂದರು.
ಉಡುಪಿಯ ಖ್ಯಾತ ಸಂಗೀತ ವಿದ್ವಾಂಸ ಮದೂರು ಪಿ ಬಾಲಸುಬ್ರಹ್ಮಣ್ಯಂ ಅವರು ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಜಿ.ವಿಜಯ ಅಧ್ಯಕ್ಷತೆ ವಹಿಸಿದ್ದರು. ಕಲಾವಿದೆ ಪ್ರತಿಭಾ ಸಾಮಗ ಅವರು ವಸಂತಿ ರಾಮ ಭಟ್ ಕುರಿತು ಅಭಿನಂದನಾ ಭಾಷಣ ಮಾಡಿದರು.
ಸಭಾ ಕಾರ್ಯಕ್ರಮದ ಬಳಿಕ ಖ್ಯಾತ ಕಲಾವಿದರಾದ ಮೈಸೂರು ಸಹೋದರರು (ಎಂ.ನಾಗರಾಜ್-ಎಂ.ಮಂಜುನಾಥ್) ಇವರ ದ್ವಂದ್ವ ವಯೋಲಿನ್ ವಾದನ ನಡೆಯಿತು. ರಾಗಧನ ಸಂಸ್ಥೆಯ ಅಧ್ಯಕ್ಷ ಡಾ.ಶ್ರೀಕಿರಣ ಹೆಬ್ಬಾರ್ ಸ್ವಾಗತಿಸಿದರು. ಉಮಾ ಮಹೇಶ್ವರಿ ವಂದಿಸಿದರು. ಉಮಾಶಂಕರಿ ಕಾರ್ಯಕ್ರಮ ನಿರೂಪಿಸಿದರು.