ತುಂಬೆ ಕಾಲೇಜಿನಲ್ಲಿ 31ನೇ ವರ್ಷದ ಕ್ರೀಡಾಕೂಟದ ಉದ್ಘಾಟನೆ
ಬಂಟ್ವಾಳ, ಡಿ. 4: ಸೋಲು-ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವ ಗುಣವನ್ನು ಎಳವೆಯಲ್ಲಿ ರೂಢಿಸಿಕೊಂಡಾಗ ಭವಿಷ್ಯತ್ತಿನ ಜೀವನದಲ್ಲೂ ಸೋಲನ್ನು ಸ್ವೀಕರಿಸುತ್ತಾ ಮುಂದೆ ಯಶಸನ್ನು ಕಾಣಲು ಸಾಧ್ಯ ಎಂದು ವಿಟ್ಲದ ಲಯನ್ಸ್ ಕ್ಲಬ್ ಅಧ್ಯಕ್ಷ ಇಂಜಿನಿಯರ್ ಸಂತೋಷ್ ಶೆಟ್ಟಿ ಪೆಲತ್ತಡ್ಕ ಹೇಳಿದ್ದಾರೆ.
ಅವರು ತುಂಬೆ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ಜರಗಿದ ತುಂಬೆ ವಿದ್ಯಾ ಸಂಸ್ಥೆಗಳ 31ನೇ ವರ್ಷದ ಕ್ರೀಡಾಕೂಟ ವನ್ನು ಉದ್ಘಾಟಿಸಿ ಮಾತನಾಡಿದರು.
ಮೊಹಿಯುದ್ದೀನ್ ಎಜುಕೇಶನಲ್ ಟ್ರಸ್ಟ್ ನ ಬಿ.ಅಬ್ದುಲ್ ಸಲಾಂ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಕ್ರೀಡಾ ಜ್ಯೋತಿ ಬೆಳಗಿಸಿ ಮಾತನಾಡಿ, ವಿದ್ಯಾರ್ಥಿಗಳ ಆಕರ್ಷಕ ಪಥಸಂಚಲನ ಮತ್ತು ಕವಾಯತು ಪ್ರದರ್ಶನವನ್ನು ಪ್ರಶಂಶಿಸಿ, ಕೇವಲ ವಿದ್ಯಾವಂತ ರಾದರೆ ಸಾಲದು, ಸ್ಪೋಟ್ರ್ಸ್ ಎನ್ನುವುದನ್ನು ಜೀವನದ ಒಂದು ಭಾಗವಾಗಿ ಇರಿಸಿಕೊಳ್ಳಬೇಕು ಹಾಗೂ ಆರೋಗ್ಯದಾಯಕ ಸ್ಪರ್ಧೆಗಳಲ್ಲಿ ಸ್ಪೋರ್ಟ್ಸ್ ಒಂದಾಗಿದೆ. ದಿನಕ್ಕೆ ಅರ್ಧ ಗಂಟೆಯಾದರೂ ಶರೀರಕ್ಕೆ ವ್ಯಾಯಾಮವಾಗತಕ್ಕ ಹವ್ಯಾಸವನ್ನು ಬೆಳೆಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಸ್ಥಾಪಕ ಡಾ. ಅಹ್ಮದ್ ಹಾಜಿ ಮುಹಿಯುದ್ದೀನ್ ಆಗಮಿಸಿ ಶುಭ ಹಾರೈಸಿದರು. ಇದೇ ವೇಳೆ ಸಂತೋಷ್ ಶೆಟ್ಟಿ ಪೆಲತ್ತಡ್ಕ ಅವರನ್ನು ಸನ್ಮಾನಿಸಲಾಯಿತು.
ತುಂಬೆ ಕಾಲೇಜಿನ ಪ್ರಾಂಶುಪಾಲ ಕೆ. ಎನ್. ಗಂಗಾಧರ ಆಳ್ವ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಪಥಸಂಚಲನದ ಉಸ್ತುವಾರಿ ವಹಿಸಿದ್ದರು. ವಿದ್ಯಾರ್ಥಿ ಮುಹಮ್ಮದ್ ಹುಸೇನ್ ಸಾಹೇಬ್ ಪ್ರತಿಜ್ಞಾ ವಿಧಿ ಬೋಧಿಸಿದರು.
ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಬಶೀರ್ ತಂಡೇಲ್, ಉಪಾಧ್ಯಕ್ಷ ನಿಸಾರ್ ಅಹ್ಮದ್ ವಳವೂರು, ಆಡಳಿತಾಧಿಕಾರಿ ಕಿಶೋರ್ ಸುವರ್ಣ, ಕಚೇರಿ ಅಧೀಕ್ಷಕ ಅಬ್ದುಲ್ ಕಬೀರ್ ಬಿ., ದೈಹಿಕ ಶಿಕ್ಷಣ ಶಿಕ್ಷಕಿ ಮೋಲಿ ಎಡ್ನಾ ಗೊನ್ಸಾಲ್ವ್ಸ್ ಮುಂತಾದವರು ಉಪಸ್ಥಿತರಿದ್ದ ಉದ್ಘಾಟನಾ ಕಾರ್ಯಕ್ರಮದಲ್ಲಿ ತುಂಬೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಸಾಯಿರಾಂ ಜೆ. ನಾಯಕ್ ಕೆ. ವಂದಿಸಿ, ತುಂಬೆ ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಶ್ರೀನಿವಾಸ ಕೆ. ನಿರೂಪಿಸಿದರು.