ಪಾಣಾಜೆ: ತಂದೆಯ ಕೊಲೆ; ಆರೋಪಿ ಪುತ್ರನ ಸೆರೆ
ಪುತ್ತೂರು, ಡಿ.5: ವ್ಯಕ್ತಿಯೋರ್ವನನ್ನು ಮಾರಕಾಯುಧದಿಂದ ಕೊಚ್ಚಿ ಕೊಲೆಗೈದ ಘಟನೆ ಪಾಣಾಜೆ ಗ್ರಾಮದ ಬೊಳ್ಳಿಂಬಳ ಎಂಬಲ್ಲಿ ಬುಧವಾರ ರಾತ್ರಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಮೃತರ ಪುತ್ರನನ್ನೇ ಪೊಲೀಸರು ಬಂಧಿಸಿದ್ದಾರೆ.
ಬೊಳ್ಳಿಂಬಳ ನಿವಾಸಿ ಕೃಷ್ಣ ನಾಯ್ಕ(65) ಕೊಲೆಯಾದವರು. ಅವರ ಪುತ್ರ ಉದಯ ನಾಯ್ಕ(28) ಕೊಲೆ ಆರೋಪಿಯಾಗಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ.
ಕೃಷ್ಣ ನಾಯ್ಕ ಅವರಿಗೆ ಇಬ್ಬರು ಮಕ್ಕಳಿದ್ದು, ಪತ್ನಿ ಲಲಿತಾ ಮತ್ತು ಪುತ್ರ ಉದಯನೊಂದಿಗೆ ಬೊಳ್ಳಿಂಬಳದಲ್ಲಿ ವಾಸವಾಗಿದ್ದರು. ಇನ್ನೊಬ್ಬಳು ಪುತ್ರಿಯನ್ನು ವಿವಾಹ ಮಾಡಿಕೊಟ್ಟಿದ್ದಾರೆ. ಕೊಲೆ ಆರೋಪಿ ಉದಯ ಯಾವುದೇ ಕೆಲಸಕ್ಕೆ ಹೋಗದೆ ಮನೆಯಲ್ಲೇ ಇರುತ್ತಿದ್ದ ಎನ್ನಲಾಗಿದ್ದು, ಈ ವಿಚಾರದಲ್ಲಿ ತಂದೆ ಹಾಗೂ ಮಗನ ನಡುವೆ ನಿರಂತರ ಜಗಳಗಳಾಗುತ್ತಿದ್ದವು.
ಬುಧವಾರ ಮಧ್ಯಾಹ್ನ ಇದೇ ವಿಚಾರಕ್ಕೆ ಮದ್ಯಾಹ್ನ ತಂದೆ - ಮಗನ ನಡುವೆ ಜಗಳವಾಗಿತ್ತೆನ್ನಲಾಗಿದೆ. ರಾತ್ರಿ ಸುಮಾರು 7:30ರ ಇವರೊಳಗಿನ ಜಗಳ ತಾರಕಕ್ಕೇರಿದ್ದು, ಉದಯ ಮನೆಯಲ್ಲಿದ್ದ ಮಚ್ಚಿನಿಂದ ತಂದೆಗೆ ಕಡಿದು ಗಂಭೀರ ಗಾಯಗೊಳಿಸಿದನೆನ್ನಲಾಗಿದೆ. ಕುತ್ತಿಗೆಗೆ ಕಡಿದ ಪರಿಣಾಮ ಕೃಷ್ಣ ನಾಯ್ಕ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಘಟನಾ ಸ್ಥಳಕ್ಕೆ ಪುತ್ತೂರು ಡಿವೈಎಸ್ಪಿ ದಿನಕರ ಶೆಟ್ಟಿ ಮತ್ತು ಸಂಪ್ಯ ಪೊಲೀಸರು ತೆರಳಿ, ತನಿಖೆ ನಡೆಸಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.