ಪಡುಬಿದ್ರಿ: ಡಿ. 7 ರಂದು ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್
ಪಡುಬಿದ್ರಿ: ಬ್ಯಾಡ್ಮಿಂಟನ್ ಟೀಂ ಕಂಚಿನಡ್ಕ ಆಶ್ರಯದಲ್ಲಿ ಮೂರನೆಯ ಆವೃತ್ತಿಯ ಹೊನಲು ಬೆಳಕಿನ ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್-2019 ಪಂದ್ಯಾಟ ಡಿ. 7 ರಂದು ಸಂಜೆ 7 ಗಂಟೆಗೆ ಕಂಚಿನಡ್ಕದ ಬ್ಯಾಡ್ಮಿಂಟನ್ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಸಂಸ್ಥೆ ಸದಸ್ಯ ಸಂತೋಷ್ ನಂಬಿಯಾರ್ ತಿಳಿಸಿದರು.
ಕಾಪುವಿನಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯ ಪ್ರತಿಭಾನ್ವಿತ ಬ್ಯಾಡ್ಮಿಂಟನ್ ಆಟಗಾರರನ್ನು ಒಳಗೊಂಡು ಈ ಕ್ರೀಡಾ ಕೂಟವನ್ನು ಆಯೋಜಿಸಲಾಗಿದೆ. ಪಂದ್ಯಾಟದಲ್ಲಿ ಎರಡು ಗುಂಪುಗಳಲ್ಲಿ ತಲಾ 5 ತಂಡಗಳು ಲೀಗ್ ಮಾದರಿಯಲ್ಲಿ ಸ್ಪರ್ಧಿಸಿ, ಉತ್ತಮ ಅಂಕಗಳಿಸಿದ ನಾಲ್ಕು ತಂಡಗಳು ಸೆಮಿಪೈನಲ್ ಪ್ರವೇಶ ಪಡೆಯಲಿವೆ. ವಿಜೇತ ಎರಡು ತಂಡಗಳು ಪೈನಲ್ನಲ್ಲಿ ಕಾದಾಡಲಿವೆ. ಸ್ಪಧೆಯಲ್ಲಿ ವಿಜೇತ ತಂಡಕ್ಕೆ ಪ್ರಥಮ ರೂ.55,555 ಹಾಗೂ ದ್ವಿತೀಯ 33,333 ನಗದು ಸಹಿತ ಕೆಬಿಪಿಎಲ್ ಟ್ರೋಫಿ ಹಾಗೂ ವೈಯಿಕ್ತಿಕ ಬಹುಮಾನ ನೀಡಲಾಗುವುದು ಎಂದರು.
ನವರಂಗ್ ವಾರಿಯರ್ಸ್, ಎಸ್.ಪಿ ಆಟಾಕರ್ಸ್, ಸ್ಕಂದ ವಾರಿಯರ್ಸ್, ನಮೋ ವಾರಿಯರ್ಸ್, ನಂದಿಕೂರು ಜವನೆರ್, ಬನ್ವಿತ ಸ್ಮಾಶರ್ಸ್, ತಾನಿಯ ರೆಡ್ ರಾಕರ್ಸ್, ಯಶ್ ವಾರಿಯರ್ಸ್, ಶೆಟ್ಟಿ ಪೈಟರ್ಸ್, ಎಸ್.ಎನ್.ಜಿ ರಾಯಲ್ಸ್ ತಂಡಗಳ ಮಾಲಕರು 70 ಆಟಗಾರನ್ನು ಬಿಡ್ಡಿಂಗ್ ಮೂಲಕ ಪಡೆದುಕೊಂಡಿದ್ದಾರೆ. ರಾಷ್ಟ ಮಟ್ಟದ ಬ್ಯಾಡ್ಮಿಂಟನ್ ಆಟಗಾರ ಸಂಜಯ್, ಮಲೇಷ್ಯಾದಲ್ಲಿ ನಡೆಯುತ್ತಿರುವ ಸ್ಟೂಡೆಂಟ್ಸ್ ಏಷ್ಯಾನ್ ಗೇಮ್ಸ್ಗೆ ಆಯ್ಕೆಗೊಂಡಿರುವ ಉಜಿರೆ ಎಸ್ಡಿಎಮ್ ಕಾಲೇಜಿನ ವಿದ್ಯಾರ್ಥಿ ವಿನಯ್ ಡಿ,ಆರ್, ಪ್ರತಿಭಾನ್ವಿತ ಆಟಗಾರರಾದ ಮನೀಶ್ ಶ್ರೀ ಮಿನ್ನ ಪಡುಬಿದ್ರಿ, ಮನೋಜ್ ಹೆಜಮಾಡಿ, ಶಿವ ಬೆಳ್ತಂಗಡಿ, ಅಜಯ್ ಶೆಟ್ಟಿ, ಪ್ರಣಮ್ ಬೆಂಗಳೂರು, ಅಶ್ರಪ್ ಪಡುಬಿದ್ರಿ, ಪ್ರದೀಪ್ ಭಟ್ ವಿವಿಧ ತಂಡಗಳಲ್ಲಿ ಆಟದ ಕರಾಮತ್ತು ಪ್ರದರ್ಶಿಸಲಿದ್ದಾರೆ ಎಂದು ವಿವರಿಸಿದರು.
ಡಿ. 7ರಂದು ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರಕಾಶ್ ಶೆಟ್ಟಿ, ಶಾಸಕರಾದ ಕೆ. ರಘುಪತಿ ಭಟ್, ಲಾಲಾಜಿ ಆರ್ ಮೆಂಡನ್, ವೇದವ್ಯಾಸ್ ಕಾಮತ್ ಮತ್ತಿತರರು ಪಾಲ್ಗೊಳ್ಳುವರು ರಾಷ್ಟ್ರಮಟ್ಟದ ಬ್ಯಾಡ್ಮಿಂಟನ್ ಆಟಗಾರ ಸಂಜಯ್ ಮತ್ತು ಕ್ರೀಡಾ ಪ್ರೋತ್ಸಾಹಕ ಗೌತಮ್ ಶೆಟ್ಟಿಯವರನ್ನು ಸನ್ಮಾನಿಸಲಾಗುವುದು ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆ ಅಧ್ಯಕ್ಷ ಪದ್ಮನಾಭ ಕಂಚಿನಡ್ಕ, ಪ್ರಧಾನ ಕಾರ್ಯದರ್ಶಿ ಶಂಕರ್ ಕಂಚಿನಡ್ಕ, ಕೋಶಾಧಿಕಾರಿ ಕೃಷ್ಣ ಬಂಗೇರ, ಸಲಹೆಗಾರ ತಾರನಾಥ ಅಮೀನ್, ಸದಸ್ಯ ನಾಗೇಶ್ ಉಪಸ್ಥಿತರಿದ್ದರು.