ಉದ್ಯಾವರ: ಎಸ್ಡಿಎಂನಲ್ಲಿ 21ನೇ ಶಿಷ್ಯೋಪನಯನ
ಉದ್ಯಾವರ, ಡಿ.6:ಇಲ್ಲಿನ ಕುತ್ಪಾಡಿಯ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯದ 21ನೇ ಶಿಷ್ಯೋಪನಯನ ಸಮಾರಂಭ ಇಂದು ಪೂರ್ವಾಹ್ನ ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ನಡೆಯಿತು.
ಮೊದಲು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರ ಸಮಕ್ಷಮದಲ್ಲಿ ಧನ್ವಂತರಿ ಹೋಮ ನಡೆಯಿತು. ಸಭಾ ಕಾರ್ಯಕ್ರಮ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ಬಿ ಯಶೋವರ್ಮರ ಅಧ್ಯಕ್ಷತೆಯಲ್ಲಿ ಕಾಲೇಜಿನ ಭಾವಪ್ರಕಾಶ ಸಭಾಂಗಣದಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿದ್ದ ಭಾಗವಹಿಸಿದ್ದ ಉಡುಪಿ ಕಾಣಿಯೂರು ಮಠದ ಶ್ರೀವಿದ್ಯಾವಲ್ಲ ತೀರ್ಥ ಸ್ವಾಮೀಜಿ ಅವರು ತಮ್ಮ ಆಶೀರ್ವಚನದಲ್ಲಿ ಸನಾತನ ಗುರು ಶಿಷ್ಯ ಪರಂಪರೆಯ ಔನ್ನತ್ಯವನ್ನು ಹಾಗೂ ಗುರು ಶಿಷ್ಯರ ಶ್ರೇಷ್ಠವಾದ ಸಂಬಂಧದ ಮಹತ್ವವನ್ನೂ ವಿವರಿಸಿದರು.
ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ಸುಚೇತ ಕುಮಾರಿ ವಿದ್ಯಾರ್ಥಿಗಳಿಗೆ ದೀಕ್ಷಾಬೋಧನೆ ಮಾಡಿಸಿದರು. ಸಂಸ್ಥೆಯ ಪ್ರಾಂಶುಪಾಲರಾದ ಡಾ.ಜಿ ಶ್ರೀನಿವಾಸ ಆಚಾರ್ಯ, ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ.ಮಮತ ಕೆ.ವಿ., ಸ್ನಾತಕೋತ್ತರ ವಿಬಾಗದ ಸಹಾಯಕ ಮುಖ್ಯಸ್ಥ ಡಾ. ನಾಗರಾಜ್ ಎಸ್. ಉಪಸ್ಥಿತರಿದ್ದರು.
ಸ್ನಾತಕೋತ್ತರ ವಿಭಾಗದ ಮುಖ್ಯಸ್ಥ ಡಾ. ನಿರಂಜನ್ ರಾವ್ ಸ್ವಾಗತಿಸಿದರು. ಸಹಾಯಕ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ.ವೀರಕುಮಾರ ಕೆ ವಂದಿಸಿದರು. ಸ್ವಸ್ಥವೃತ್ತ ವಿಭಾಗದ ಸಹಪ್ರಾಧ್ಯಾಪಕ ಡಾ.ಯೋಗೀಶ ಆಚಾರ್ಯ ಹಾಗೂ ರೋಗನಿಧಾನ ವಿಭಾಗದ ಉಪನ್ಯಾಸಕ ಡಾ. ಅರುಣ್ ಕುಮಾರ ಕಾರ್ಯಕ್ರಮ ನಿರೂಪಿಸಿದರು.