'ಸ್ವಾತಂತ್ರ್ಯ ಹೋರಾಟದಲ್ಲಿ ಭಾರತ ಸೇವಾದಳದ ಕೊಡುಗೆ ಅಪಾರ'
ರಾಷ್ಟ್ರೀಯ ಭಾವೈಕ್ಯತಾ ಮಕ್ಕಳ ಮೇಳದಲ್ಲಿ ಶಾಸಕ ಲಾಲಾಜಿ ಮೆಂಡನ್
ಶಿರ್ವ, ಡಿ.7: ದೇಶದ ಸ್ವಾತಂತ್ರ್ಯ ಹೋರಾಟಗಾರರಿಗೆ ಬೆಂಬಲವಾಗಿ ನಿಂತು ಅವರ ಹೋರಾಟದಲ್ಲಿ ಸ್ವಯಂಸೇವಕರಾಗಿ ಕರ್ತವ್ಯ ನಿರ್ವಹಿಸಿದ ಭಾರತ ಸೇವಾದಳ ಸ್ವಾತಂತ್ರ್ಯ ಹೋರಾಟದಲ್ಲಿ ಅತ್ಯಪೂರ್ವ ಕೊಡುಗೆ ನೀಡಿದೆ ಎಂದು ಕಾಪು ಕ್ಷೇತ್ರ ಶಾಸಕ ಲಾಲಾಜಿ ಆರ್.ಮೆಂಡನ್ ಹೇಳಿದ್ದಾರೆ.
ಉಡುಪಿ ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ, ಭಾರತ ಸೇವಾದಳದ ಮಾರ್ಗದರ್ಶನದಲ್ಲಿ ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ನಿರ್ದೇಶನದಲ್ಲಿ ಭಾರತ ಸೇವಾದಳ ಉಡುಪಿ ತಾಲೂಕು ಸಮಿತಿ, ಮಕ್ಕಳ ಮೇಳ ಸಮಿತಿ, ಶಂಕರಪುರ ಸೈಂಟ್ ಜೋನ್ಸ್ ಪ್ರೌಢ ಶಾಲೆಯ ಸಂಯುಕ್ತ ಆಶ್ರಯದಲ್ಲಿ ಶನಿವಾರ ಶಂಕರಪುರ ಶಾಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾದ ಉಡುಪಿ ತಾಲೂಕು ಮಟ್ಟದ ರಾಷ್ಟ್ರೀಯ ಭಾವೈಕ್ಯತಾ ಮಕ್ಕಳ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಶಾಲೆಗಳಲ್ಲಿ ಮಕ್ಕಳಲ್ಲಿ ಸೇವಾ ಮನೋಭಾವನೆ, ಸ್ವಯಂಶಿಸ್ತು, ದೇಶಪ್ರೇಮ, ರಾಷ್ಟ್ರೀಯ ಭಾವೈಕ್ಯತೆಯನ್ನು ಜಾಗೃತಗೊಳಿಸು ವಲ್ಲಿ ಭಾರತ ಸೇವಾದಳದ ಪಾತ್ರ ಅಪಾರವಾದುದು. ಈ ಕಾರ್ಯಕ್ಕೆ ಸರಕಾರದಿಂದ ನೆರವು ಒದಗಿಸಿಕೊಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಅವರು ತಿಳಿಸಿದರು.
ಬಂಟಕಲ್ಲು ಶ್ರೀಮಧ್ವವಾದಿರಾಜ ತಾಂತ್ರಿಕ ಕಾಲೇಜು ಆಡಳಿತ ಮಂಡಳಿ ಕಾರ್ಯದರ್ಶಿ ರತ್ನ ಕುಮಾರ್ ವಿದ್ಯಾರ್ಥಿಗಳ ಪುರ ಮೆರವಣಿಗೆಯನ್ನು ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಚರ್ಚ್ನ ಧರ್ಮಗುರು, ವಿದ್ಯಾಸಂಸ್ಥೆಗಳ ಸಂಚಾಲಕ ರೆ.ಫಾ.ಫರ್ಡಿನಾಂಡ್ ಗೊನ್ಸಲ್ವಿಸ್ ವಹಿಸಿದ್ದರು. ಕಟಪಾಡಿ ಗ್ರಾಪಂ ಅಧ್ಯಕ್ಷೆ ಜ್ಯೂಲಿಯೆಟ್ ವೇರಾ ಡಿೋಜ ರಾಷ್ಟ್ರಧ್ವಜಾರೋಹಣಗೈದರು.
ಮುಖ್ಯ ಅತಿಥಿಗಳಾಗಿ ಮುಂಬೈ ಉದ್ಯಮಿ ಶಶಿಧರ ಕೆ.ಶೆಟ್ಟಿ ಇನ್ನಂಜೆ, ಇನ್ನಂಜೆ ವ್ಯ.ಸೇ.ಸಹಕಾರಿ ಸಂಘದ ಅಧ್ಯಕ್ಷ ರಾಜೇಶ ರಾವ್ ಪಾಂಗಾಳ, ಜಿಪಂ ಸದಸ್ಯೆ ಗೀತಾಂಜಲಿ ಸುವರ್ಣ, ತಾಪಂ ಅಧ್ಯಕ್ಷೆ ನೀತಾ ಗುರುರಾಜ್, ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ ಕೆ., ತಾಲೂಕು ದೈಹಿಕ ಶಿಕ್ಷಣಾಧಿಕಾರಿ ವಿಶ್ವನಾಥ ಬಾಯಿರಿ, ಕುರ್ಕಾಲು ಗ್ರಾಪಂ ಅಧ್ಯಕ್ಷೆ ಶೋಭಾ ಸಾಲಿಯಾನ್, ಸೇವಾದಳ ಜಿಲ್ಲಾ ಕಾರ್ಯದರ್ಶಿ ಆರೂರು ತಿಮ್ಮಪ್ಪಶೆಟ್ಟಿ, ಸದಸ್ಯ ಬಿ.ಪುಂಡಲೀಕ ಮರಾಠೆ, ಸೂರ್ಯ ಚೈತನ್ಯ ಶಿಕ್ಷಣ ಸಂಸ್ಥೆಯ ಸಂಚಾಲಕ ಶಂಭುದಾಸ್ ಗುರೂಜಿ ಕುತ್ಯಾರು, ಹೆರಾಲ್ಡ್ ಡಿಸೋಜ ಉಡುಪಿ, ಅಧಿನಾಯಕರಾದ ಸತ್ಯಸಾಯಿ ಪ್ರಸಾದ್, ರಾಜೇಶ್ವರೀ, ಸಹಕಾರ್ಯದರ್ಶಿ ಡೋಮಿಯನ್ ನೊರೋನ್ನಾ, ಉಪಸ್ಥಿತರಿದ್ದರು.
ಭಾರತ ಸೇವಾದಳ ಉಡುಪಿ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ಯು. ಆರ್.ಸಭಾಪತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೌಢಶಾಲಾ ಮುಖ್ಯ ಶಿಕ್ಷಕ ಅಶ್ವಿನ್ ರೊಡ್ರಿಗಸ್ ವಂದಿಸಿದರು. ಸತೀಶ್ ಚಿತ್ರಪಾಡಿ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಸಂಘಟಕ ಪಕ್ಕೀರಗೌಡ ನಾ.ಹಳೆಮನಿ ನೇತೃತ್ವದಲ್ಲಿ ಆಕರ್ಷಕ ಪಥಸಂಚಲನ ನಡೆಯಿತು.